ರಾಜ್ಯ

ಬೆಂಗಳೂರು: ಕಾಡುಹಂದಿ ಬೇಟೆಗೆ ತೆರಳಿದ್ದ ವ್ಯಕ್ತಿ ನಿಗೂಢ ಸಾವು!

Srinivasamurthy VN

ಬೆಂಗಳೂರು: ಸ್ನೇಹಿತರೊಂದಿಗೆ ಕಾಡುಹಂದಿ ಬೇಟೆಗೆ ತೆರಳಿದ್ದ ವ್ಯಕ್ತಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾತನೂರು ಅರಣ್ಯ ಪ್ರದೇಶದಲ್ಲಿ 33 ವರ್ಷದ ರವೀಶ್ ಎಂಬಾತನ ಮೃತದೇಹ ಪತ್ತೆಯಾಗಿದ್ದು, ಈತ ಇತ್ತೀಚೆಗಷ್ಟೇ ತನ್ನ ಸ್ನೇಹಿತರೊಂದಿಗೆ ಬೇಟೆಗೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಎನ್ನಲಾಗಿದೆ. ರವೀಶ್ ದೇಹದ ಮೇಲೆ ಗುಂಡು ತಗುಲಿರುವ ಗಾಯದ ಗುರುತಿದ್ದು, ಆತನ ಸ್ನೇಹಿತರೇ ಆತನನ್ನು ಕೊಂದು ಹಾಕಿದ್ದಾರೆ ಎಂದು ರವೀಶ್ ಪೋಷಕರು ಆರೋಪಿಸಿದ್ದಾರೆ.

ರವೀಶ್ ತಂದೆ ರಂಗಪ್ಪ ಅವರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗುಂಡು ಹಾರಿಸಿ ತನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ರವೀಶ್ ಮತ್ತು ಆತನ ನಾಲ್ವರು ಸ್ನೇಹಿತರು ಅಂಬದಹಳ್ಳಿಯಲ್ಲಿರುವ ರವೀಶ್ ಸಹೋದರಿಯ ಮನೆಗೆ ತೆರಳಿದ್ದರು. ರಾತ್ರಿ ಎಲ್ಲರೂ ಕಾಡು ಹಂದಿಯ ಭೇಟೆಗೆ ತೆರಳಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ನನಗೆ ಕರೆ ಮಾಡಿದ್ದ ರವೀಶ್ ಸ್ನೇಹಿತರು ರವೀಶ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿ ಕಾಲ್ ಕಟ್ ಮಾಡಿದರು. ಬಳಿಕ ನಾನು ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅವರು ಹೇಳಿದ್ದ ಜಾಗಕ್ಕೆ ಹೋಗಿ ನೋಡಿದಾಗ ರವೀಶ್ ಶವ ಪತ್ತೆಯಾಗಿತ್ತು. ಅವರೇ ಆತನನ್ನು ಶೂಟ್ ಮಾಡಿ ಈ ಸಾವನ್ನು ಅಪಘಾತ ಎಂದು ಬಿಂಬಿಸಲು ಸ್ನೇಹಿತರೇ ಗೂಡ್ಸ್ ಗಾಡಿಯಲ್ಲಿ ಹಾಕಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಸಿ ಇದನ್ನು ಅಪಘಾತ ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಪ್ರಸ್ತುತ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ರವೀಶ್ ಮೃತದೇಹವಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಗಾಗಿ 2 ವಿಶೇಷ ತಂಡ ರಚನೆ ಮಾಡಲಾಗಿದೆ.

SCROLL FOR NEXT