ರಾಜ್ಯ

ಮಂಗಳೂರು: ಕೊರೋನಾ ಸೋಂಕು ಭೀತಿ, ದುಬೈಯಿಂದ ಮರಳಿದ ವ್ಯಕ್ತಿ ಆಸ್ಪತ್ರೆಗೆ ದಾಖಲು

Srinivasamurthy VN

ಮಂಗಳೂರು: ದುಬೈಯಿಂದ ಬೆಂಗಳೂರು ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕರಾಯ ಎಂಬ ಗ್ರಾಮಕ್ಕೆ ಬಂದಿರುವ ಯುವಕನೋರ್ವ ಕೆಮ್ಮು-ನೆಗಡಿಯಿಂದ ಬಳಲುತ್ತಿದ್ದು, ಸ್ಥಳೀಯ ಪಂಚಾಯತ್‌ ಆಡಳಿತದ ಸೂಚನೆ ಮೇರೆಗೆ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

23 ವರ್ಷ ವಯೋಮಾನದ ಈ ಯುವಕ ಕಳೆದ ಮೂರು ದಿನಗಳ ಹಿಂದೆ ಬಂದಿದ್ದು, ಬಂದ ಸಂಭ್ರಮದಲ್ಲಿ ಅಕ್ಕಪಕ್ಕದವರೊಂದಿಗೆ ಬೆರೆತು ಶುಭಾಶಯ ವಿನಿಮಯ ಮಾಡಿಕೊಂಡಿದ್ದನೆನ್ನಲಾಗಿದೆ. ಈಮಧ್ಯೆ ಶೀತ ನೆಗಡಿಯೊಂದಿಗೆ ಬಳಲುತ್ತಿದ್ದ ಈತನ ಬಗ್ಗೆ ತಣ್ಣೀರುಪಂತ ಗ್ರಾ.ಪಂ.ಗೆ  ಸ್ಥಳೀಯರು ದೂರು ನೀಡಿದ ಕಾರಣ ಆಸ್ಪತ್ರೆಗೆ ದಾಖಲಾಗಲು ಪಂಚಾಯತ್‌ ಆಡಳಿತ ಯುವಕನಿಗೆ ನಿರ್ದೇಶನ ನೀಡಿತು.

ಪಂಚಾಯತ್‌ ನೀಡಿದ ನಿರ್ದೇಶನ ದಂತೆ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾದ ಯುವಕ ನೇರವಾಗಿ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ತಾನೇನು ಮಾಡಬೇಕೆಂದು ಪೊಲೀಸರಲ್ಲಿ ವಿಚಾರಿಸಿದ್ದಾನೆ. ಕೋವಿಡ್-19 ವೈರಸ್‌ ಭೀತಿಯಿಂದ ಠಾಣೆಯ ಸುತ್ತಲೆಲ್ಲಾ  ಮುಂಜಾಗ್ರತಾ ಕ್ರಮ ಕೈಗೊಂಡ ಪೊಲೀಸರಿಗೆ ಶಂಕಿತ ವ್ಯಕ್ತಿ ನೇರವಾಗಿಯೇ ಠಾಣೆಗೆ ಬಂದಿರುವುದರಿಂದ ಗೊಂದಲದ ಸನ್ನಿವೇಶ ಸೃಷ್ಟಿಯಾಯಿತು. ಕೂಡಲೇ ಪೊಲೀಸರು ಆ ವ್ಯಕ್ತಿಗೆ ದಯವಿಟ್ಟು ಕಂಡಕಂಡಲ್ಲಿಗೆ ಹೋಗದೇ ನೇರವಾಗಿ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾಗಿ ಎಂದು  ತಿಳಿಸಿ ಆತ ಬಂದ ವಾಹನದಲ್ಲೇ ಪುತ್ತೂರು ಆಸ್ಪತ್ರೆಗೆ ಕಳಿಸಿಕೊಟ್ಟರು.

ಇತ್ತ ಶಂಕಿತ ವ್ಯಕ್ತಿಯ ವೈದ್ಯಕೀಯ ತಪಾಸಣೆಯಲ್ಲಿ ನೆಗೆಟಿವ್‌ ರಿಪೋರ್ಟ್‌ ಬರಲಿ ಎಂದು ದೇವರನ್ನು ಪ್ರಾರ್ಥಿಸುವ ಸ್ಥಿತಿ ಪೊಲೀಸರದ್ದಾಗಿತ್ತು.

SCROLL FOR NEXT