ರಾಜ್ಯ

ಬಾಗಲಕೋಟೆ: ಹೆಚ್ಚುತ್ತಲೇ ಇದೆ ಬೇರೆಡೆಯಿಂದ ತವರಿಗೆ ಬರುವವರ ಸಂಖ್ಯೆ

Nagaraja AB

ಬಾಗಲಕೋಟೆ: ಮಾರಕ ವೈರಸ್ ಕೊರೋನಾ ತಡೆಗಾಗಿ ಜಿಲ್ಲೆಯಾದ್ಯಂತ  ಅಹೋರಾತ್ರಿ ಕಚ್ಚೆಚ್ಚರ ವಹಿಸಿರುವಂತೆ ಇನ್ನೊಂದೆಡೆ ರಾಜ್ಯದ ನಾನಾ ಗಡಿಭಾಗಗಳಿಂದ ತವರಿಗೆ ಬರುವ ಜನರ ಆರೋಗ್ಯ ತಪಾಸಣೆ ಮಾಡಿ ಅವರಿಗೆಲ್ಲ ಕ್ವಾರೆಂಟೈನ್  ವ್ಯವಸ್ಥೆ , ಊಟ ವಸತಿ ಹಾಗೂ ಸೂಕ್ತ ನಿಗಾ ಮತ್ತು ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡುವ ಮಹೋನ್ನತ ಕಾರ್ಯ ನಿರಂತರವಾಗಿ ನಡೆಯುತ್ತಿದೆ

ಕೊರೋನಾ  ವೈಸರ್ ತಡೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಅನುಷ್ಠಾನಕ್ಕಾಗಿ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದು, ಮನವೊಲಿಕೆ, ಒತ್ತಾಯದ ಮೂಲಕ ಜನತೆಯನ್ನು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳುವ ಕೆಲಸ ನಡೆದಿದೆ. ಜಿಲ್ಲೆಯ ಕೆಲ ಭಾಗಗಳಲ್ಲೂ ಪೊಲೀಸರು ಹಾಗೂ ಜಿಲ್ಲಾಡಳಿತಕ್ಕೆ ಬೇಸರ ಎನ್ನುವ ರೀತಿಯಲ್ಲಿ ಕೆಲವರು ಕಾನೂನು ಉಲ್ಲಂಘಿಸಿದ ಮನೆ ಬಿಟ್ಟು ತಿರುವುದು ತಲೆನೋವಾಗಿ ಪರಿಣಮಿಸಿದೆ. ಬೆಳಗಾದರೆ ಸಾಕು ಮಾರುಕಟ್ಟೆಗಳಲ್ಲಿ ತರಕಾರಿಗಾಗಿ ಮುಗಿಬೀಳವ ಕೆಲಸ ನಿರಂತರವಾಗಿ ನಡೆದಿದೆ. ಅವರನ್ನೆಲ್ಲ ತಹಬದಿಗೆ ತರುವುದೇ ಪೊಲೀಸರಿಗೆ ನಿತ್ಯ ಬೆಳಗಿನ ಕೆಲಸವಾಗಿದೆ

ಏತನ್ಮಧ್ಯೆ ಮಹಾರಾಷ್ಟ, ಗೋವಾ, ಕೇರಳ ಮತ್ತು ಬೆಂಗಳೂರಿನಿಂದ  ಬಹುದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕ ವರ್ಗ ಜಿಲ್ಲೆಯ ಕಡೆಗೆ ಆಗಮಿಸುತ್ತಿದೆ. ಗೋವಾ, ಕೇರಳ, ಮಹಾರಾಷ್ಟ  ಮತ್ತು ಬೆಂಗಳೂರಿನಿಂದ  ಆಗಮಿಸುತ್ತಿರುವ ಕಾರ್ಮಿಕರು ಕೇವಲ ಬಾಗಲಕೋಟೆ ಜಿಲ್ಲೆಗಷ್ಟೆ ಸೇರಿದವರಾಗಿರದೇ ಇತರ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ಹೊರಟವರು ಇದ್ದಾರೆ. 

ಜಿಲ್ಲೆಗೆ ಸೇರಿದ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ, ಅವರಿಗೆಲ್ಲ ಸಂಬಂಧಿಸಿದ  ತಾಲೂಕುಗಳಲ್ಲಿನ ಸಮುದಾಯ ಭವನ ಇಲ್ಲವೆ ವಸತಿ ನಿಲಯಗಳಲ್ಲಿ ಊಟ, ವಸತಿ ಮಾಡಿ ಕ್ವಾರೆಂಟನ್ ಹೋಮ್‌ಗಳಲ್ಲಿ ಇಡುವ ಕೆಲಸ ನಡೆದಿದೆ. ಹೊರಗಿನಿಂದ ಬಂದವರ ಆರೋಗ್ಯ ತಪಾಸಣೆ ನಿತ್ಯ ನಡೆಯುತ್ತಿದೆ. ಇವರ ಬಗ್ಗೆ ಕಾಳಜಿ ವಹಿಸಲು ಪೊಲೀಸರು ಮತ್ತು ವೈದ್ಯರು, ನರ್ಸ್ ಗಳು ನೇಮಕಗೊಂಡಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಇತರ ರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ಅವರನ್ನೆಲ್ಲ ತಪಾಸಣೆ ನಡೆಸಿ ಕ್ವಾರಂಟೆನ್ ಹೋಮ್‌ಗಳಲ್ಲಿ ಇಟ್ಟು ನಿಗಾ ವಹಿಸುವ ಕೆಲಸ ನಡೆಯುತ್ತಿದೆ.

ಜಿಲ್ಲೆಯ ಗಡಿ ಭಾಗದ ಚೆಕ್ ಪೊಸ್ಟ್ಗಳಲ್ಲಿ ಬೆಂಗಳೂರಿನಿಂದ ಮಹಾರಾಷ್ಟ್ರ,  ರಾಜಸ್ಥಾನ, ಮಧ್ಯಪ್ರದೇಶದ ಕಾರ್ಮಿಕರು ತಮಗೆ ಸಿಕ್ಕ ವಾಹನಗಳಲ್ಲಿ ಬಂದಿದ್ದಾರೆ. ಇವರೆಲ್ಲ ಅನ್ನ, ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ

ಇವರನ್ನೆಲ್ಲ ಸುರಕ್ಷಿತವಾಗಿ ಅವರ ರಾಜ್ಯಗಳಿಗೆ ತಲುಪಿಸುವ ವ್ಯವಸ್ಥೆ ಆಗಬೇಕಿದೆ. ಮಾರ್ಗ ಮಧ್ಯದಲ್ಲಿ ಕೆಲವರು ಸ್ವಯಂ ಪ್ರೇರಣೆಯಿಂದ ನೀರು, ಆಹಾರ ವಿತರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಅವರೆಲ್ಲ ಊರು ತಲುಪುವುದು ಬಹಳ ಕಷ್ಟವಾಗಿದೆ. ಆಗಲೇ ತವರಿಗೆ ತಲುಪಲು ಊರು ಬಿಟ್ಟು ಬಂದಾಗಿದೆ. ಆದರೆ ಅವರಿಗೆ  ನೀರು ಮತ್ತು ಆಹಾರದ ಸಮಸ್ಯೆ ಕಾಡುತ್ತಿದೆ. ಜತೆಗೆ ಚೆಕ್ ಪೋಸ್ಟ್ಗಳಲ್ಲಿ ಸಮಜಾಯಿಷಿ ನೀಡುವುದು ಕಷ್ವಾಗಿದೆ

ಒಂದು ಕಡೆ ಲಾಕ್‌ಡೌನ್ ನಿಯಮಗಳ ಪಾಲನೆ ಆಗಬೇಕಿದೆ. ಈ ವಿಷಯದಲ್ಲಿ ಜಿಲ್ಲಾಡಳಿತ ಜನತೆ ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳುವ ಜನತೆಗೆ ಅಗತ್ಯ ಸೇವಾ ವಲಯದಲ್ಲಿನ ಸಿಬ್ಬಂದಿಗೆ, ಸ್ವಯಂ ಸೇವಕರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಜಿಲ್ಲೆಯಲ್ಲಿನ ಅನೇಕ ಸ್ವಯಂ ಸೇವಾ ಸಂಸ್ಥೆಗಳು, ಸಂಘಟನೆಗಳು ಅಗತ್ಯ ಸೇವಾ ವಲಯದಲ್ಲಿನ ಸಿಬ್ಬಂದಿಗೆ ಆಹಾರ, ನೀರು ಒದಗಿಸುವ ಕೆಲಸ ಮಾಡುತ್ತಿವೆ.
ಒಟ್ಟಾರೆ ಒಳಗಿದ್ದವರನ್ನು ಮತ್ತು ಹೊರಗಿನಿಂದ ತವರಿಗೆ ಬರುವವರನ್ನೆಲ್ಲ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವವರಿಗೆ ಜನತೆ ಸಹಕಾರ ಮಾಡಬೇಕಿದೆ. ಜನತೆ ಮನೆ ಬಿಟ್ಟ ಹೊರಗೆ ಬಾರದೇ ಇದ್ದರೆ ಸಾಕು. ಅದೇ ದೊಡ್ಡ ಕೊಡುಗೆ ಎನ್ನುವುದು ಜಿಲ್ಲಾಡಳಿತದ ಮನವಿಯಾಗಿದೆ.

ವರದಿ: ವಿಠ್ಠಲ ಆರ್. ಬಲಕುಂದಿ
 

SCROLL FOR NEXT