ಮೈಸೂರು: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ವಾಸಿಸುತ್ತಿರುವ ಸುಮಾರು 100 ಕುಟುಂಬಗಳಿಗೆ ಜೀವನ ದುಸ್ತರ, ಇತ್ತೀಚಿನ ಲಾಕ್ ಡೌನ್ ಇನ್ನಷ್ಟು ಕಷ್ಟ ಮಾಡಿದೆ. ಒಂದು ಸಣ್ಣ ಬೆಂಕಿಪೊಟ್ಟಣ, ಟೀ ಪುಡಿಗೆ 10-12 ಕಿಲೋ ಮೀಟರ್ ಕಾಡುಪ್ರದೇಶದ ಮೂಲಕ ನಡೆದುಕೊಂಡು ಹೋಗಿ ದೇವಸ್ಥಾನದ ಸಮೀಪ ಅಥವಾ ಮಾರತಹಳ್ಳಿ ಸಮೀಪದಿಂದ ತರಬೇಕಿದೆ.
ಲಾಕ್ ಡೌನ್ ನಿಂದಾಗಿ ಬೆಳಗ್ಗೆ 7 ಗಂಟೆಯಿಂದ ಕೇವಲ 3 ಗಂಟೆ ಮತ್ತು ಸಾಯಂಕಾಲ 3 ಗಂಟೆ ಮಾತ್ರ ತೆರೆದಿರುವುದರಿಂದ ನಿವಾಸಿಗಳು ಅಷ್ಟು ಹೊತ್ತಿನ ಒಳಗೆ ಮಾತ್ರ ತಮ್ಮ ಅವಶ್ಯಕತೆಯ ವಸ್ತುಗಳನ್ನು ಅಂಗಡಿಗಳಿಗೆ ಹೋಗಿ ತರಬೇಕಿದೆ. ಸರಿಯಾದ ರಸ್ತೆ ಸೌಕರ್ಯಗಳಿಲ್ಲ, ಊರಿಗೆ ಸಂಪರ್ಕ ಸರಿಯಾಗಿಲ್ಲದೆ ತುಳಸೀಕೆರೆ, ಇಂಡಿಗನಾಥ, ಪಡಸಲನಾಥ, ದೊಡ್ಡಣ್ಣೆ, ತೆಕ್ಕೆಡೆ ಮತ್ತು ಕುಂಡಿ ಭಾಗಗಳ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಡಿಗನಾಥ, ಕೊಕ್ಕೊರೆ ಮತ್ತು ಕುಂಡಿಗೆಗಳಿಗೆ ಸರಿಯಾದ ಕಾಲುದಾರಿ ಕೂಡ ಇಲ್ಲ. ಆಹಾರ ಪದಾರ್ಥಗಳು, ಗೊಬ್ಬರ, ನಿರ್ಮಾಣ ವಸ್ತುಗಳಿಗೆ ಜನರು ಸಾಗಾಟಕ್ಕೆ ಕತ್ತೆಯನ್ನು ಅವಲಂಬಿಸಬೇಕಾಗಿದೆ.
ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಒಂದು ಬಾರಿಗೆ 100ರಿಂದ 150 ರೂಪಾಯಿ ನೀಡಬೇಕಾಗುತ್ತದೆ. ಮತ್ತೆ ಹಿಂತಿರುಗಿ ಹೋಗಲು ಕೂಡ ಅಷ್ಟೇ ಹಣ ನೀಡಬೇಕು. ಆನೆಗಳ ಚಲನವಲನ ಹೆಚ್ಚಾಗಿರುವುದರಿಂದ ಗ್ರಾಮಸ್ಥರು ಬೆಳಗ್ಗೆ 9 ಗಂಟೆಗೆ ಮೊದಲು ಹೊರಗೆ ಕಾಲಿಡುವಂತಿಲ್ಲ, ಸಾಯಂಕಾಲ ಕೂಡ 5-6 ಗಂಟೆ ನಂತರ ಹೊರಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂದು ಪಡಸಲನಾಥ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯ ಲಿಂಗರಾಜು ಹೇಳುತ್ತಾರೆ.