ರಾಜ್ಯ

ಪೂರ್ಣ ಪಾನ ನಿಷೇಧ ಜಾರಿಗೆ ಎಚ್. ಕೆ. ಪಾಟೀಲ್ ಆಗ್ರಹ

Nagaraja AB

ಬೆಂಗಳೂರು: ಮದ್ಯ  ಮಾರಾಟ 48 ದಿನಗಳಿಂದ ನಿಂತಿದ್ದು, ಈ ಮೂಲಕ ಅಮಲು ಮುಕ್ತ ಸಮಾಜದತ್ತ  ಅರಿವಿಲ್ಲದೆ ದಾಪುಗಾಲಿಡುತ್ತಿದ್ದೇವೆ. ಇದೇ ಅವಕಾಶ ಬಳಸಿ ರಾಜ್ಯದಲ್ಲಿ ಪೂರ್ಣ ಪಾನ ನಿಷೇಧ ಜಾರಿಗೆ  ತರುವಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರವನ್ನು  ಆಗ್ರಹಿಸಿದ್ದಾರೆ

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮದ್ಯ ವ್ಯಸನದಿಂದ ಅಧಿಕಾರ ದುರುಪಯೋಗ, ಜಗಳ, ಅಶಾಂತಿ  ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಿದೆ. ಹೀಗಾಗಿ ಮದ್ಯಪಾನ ನಿಷೇಧಿಸುವುದು ಇಂದಿನ  ಅತ್ಯಂತ ಅವಶ್ಯಕತೆಯಾಗಿದೆ ಎಂದಿದ್ದಾರೆ.

ಶ್ರಮಜೀವಿಗಳು ಬಡವರು, ಜೀವನದ ಜಂಜಾಟದಿಂದ  ತತ್ತರಿಸಿದವರ ಸುಖಕ್ಕಾಗಿ ಮದ್ಯಪಾನ ಬೇಕೇಬೇಕು ಎಂದು ವಾದಿಸುವವರಿದ್ದಾರೆ. ಮದ್ಯಪಾನ  ಶ್ರಮ ಜೀವಿಗಳಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ ಅವರ ಬಡತನ ಹೆಚ್ಚಿ ಮರಣಗಳು  ಹೆಚ್ಚುತ್ತವೆ. ನಿರಂತರ ಮನೆಯಲ್ಲಿ ಸುಖ - ಶಾಂತಿ ಬದಲು , ದುಃಖ ಕಷ್ಟಗಳಿಗೆ ಭದ್ರ  ಬುನಾದಿ ಹಾಕುತ್ತದೆ. ಮದ್ಯಪಾನದಿಂದ ಹೆಣ್ಣುಮಕ್ಕಳು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ.  ಮಕ್ಕಳು ತಮ್ಮ ಬಾಲ್ಯದ ಸುಖ ನೆಮ್ಮದಿಯಿಂದ ವಂಚಿತರಾಗುತ್ತಿದ್ದಾರೆ. ಮದ್ಯಪಾನ  ಕುಟುಂಬಗಳನ್ನು ಒಡೆಯುತ್ತಿದೆ. ಸುಶಿಕ್ಷಿತ ವರ್ಗದಲ್ಲಿ ವಿವಾಹ ವಿಚ್ಛೇದನಗಳು ವಿಪರೀತ  ಪ್ರಮಾಣದಲ್ಲಿ ಹೆಚ್ಚಾಗಿವೆ  ಎಂದು ಅವರು ತಿಳಿಸಿದ್ದಾರೆ.

ಮದ್ಯಪಾನ ನಿಷೇದ ಅತ್ಯಂತ ಕಠಿಣವಾದರೂ ಇದು  ಶ್ರೇಷ್ಠ ಕೆಲಸ. ಪ್ರಸಕ್ತ ಪ್ರಕೃತಿ ರೂಪಿಸಿರುವ ಪರಿಸ್ಥಿತಿಯ ಪ್ರಯೋಜನ ಪಡೆದು ಸಂತಸದ ,  ನೆಮ್ಮದಿಯ , ತೃಪ್ತಿಯ ಸಮಾಜ ನಿರ್ಮಾಣದತ್ತ  ಹೆಜ್ಜೆಗಳನ್ನಿಡಲು ಮುಖ್ಯಮಂತ್ರಿಗಳು ದೃಢ  ಸಂಕಲ್ಪರಾಗಬೇಕು. ಮದ್ಯಪಾನ ನಿಷೇಧಕ್ಕೆ ಸುಸಂಸ್ಕೃತ ಸಮಾಜ, ಅದಲ್ಲಿಯೂ ಮಹಿಳಾ  ಸಂಘಟನೆಗಳು ಹೊರಾಡುತ್ತಿವೆ. ಇದನ್ನು ಗಮನದಲ್ಲಿರಿಸಿಕೊಂಡು ನಾಡಿನ ಅಭಿವೃದ್ಧಿ  ಸೂಚ್ಯಂಕಕ್ಕಿಂತ ಸಮಾಜದ ಸಂತೋಷದ , ನೆಮ್ಮದಿಯ ಸೂಚ್ಯಂಕ ಹೆಚ್ಚುವಂತೆ ಮಾಡಲು ನಿರ್ಮಲ  ವಾತಾವರಣ ನಿರ್ಮಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ

SCROLL FOR NEXT