ಬೆಳಗಾವಿ: ಇಡೀ ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೋನಾ ವೈರಸ್ ಹಿರೇಬಾಗೇವಾಡಿ ಗ್ರಾಮಸ್ಥರನ್ನು ಹಿಂಡಿಹಿಪ್ಪೆ ಮಾಡುತ್ತಿದೆ.
ದೆಹಲಿಯ ತಬ್ಲೀಘಿಗಳಿಂದಾಗಿ ಗ್ರಾಮಕ್ಕೆ ಅಂಟಿದ ಕೊರೋನಾ ವೈರಸ್ ದಿನದಿ ದಿನಕ್ಕೆ ಊಹಿಸಲಾರದಷ್ಟು ತನ್ನ ಪ್ರಭಾವವನ್ನು ಹೆಚ್ಚಿಸುತ್ತಲೇ ಇದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹತ್ತಿರದಲ್ಲಿ ಬರುವ ಈ ಹಿರೇಬಾಗೇವಾಡಿ ಗ್ರಾಮ ಇದೀಗ ಅಕ್ಷರಶಃ ಕೊರೋನಾದಿಂದ ತತ್ತರಿಸಿ ಹೋಗಿದೆ. ಕೊರೋನಾದಿಂದಾಗಿ ಇಲ್ಲಿನ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಮಹಾಮಾರಿ ವೈರಸ್ ಹೆಸರು ಕೇಳಿದರೆ ಸಾಕು ಇಲ್ಲಿನ ಜನರು ನಡುಗಿ ಹೋಗುತ್ತಿದ್ದಾರೆ.
ಕಳೆದ 24 ಗಂಟೆಗಲಲ್ಲಿ ಹಿರೇಬಾಗೇವಾಡಿ ಗ್ರಾಮದಲ್ಲಿ 10 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಗ್ರಾಮದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಈ ಗ್ರಾಮದ ಅಕ್ಕಪಕ್ಕದ ಗ್ರಾಮಸ್ಥರಲ್ಲಿಯೂ ಆತಂಕ ಮೂಡುವಂತೆ ಮಾಡಿದೆ.
ಗ್ರಾಮದಲ್ಲಿ ಸೋಂಕು ತಡೆಗಟ್ಟಲು ಜಿಲ್ಲಾಡಳಿ ಸಾಕಷ್ಟ ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ ಸೋಂಕು ಮಾತ್ರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಳೆದ 45 ದಿನಗಳಿಂದ ವ್ಯಾಪಾರ ವಹಿವಾಟುಗಳು, ವಾಹನ ಸಂಚಾರ, ಜನರ ಓಡಾಟಗಳು ಸಂಪೂರ್ಣವಾಗಿ ಬಂದ್ ಆಗಿವೆ. ಅಲ್ಲದೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೂ ಕೂಡ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದೀಗ ಇಡೀ ಊರೇ ಸ್ತಬ್ಧಗೊಂಡಿದೆ. ಗ್ರಾಮದಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.