ರಾಜ್ಯ

ಮದುವೆ ತಂದಿದ್ದ ಆತಂಕ, ಕೊರೊನಾ ಭೀತಿಯಿಂದ ಕೊಪ್ಪಳ ನಿರಾಳ!

Vishwanath S

ಕೊಪ್ಪಳ: ಕಳೆದೆರಡು ದಿನಗಳಿಂದ ಕೊಪ್ಪಳ ಜಿಲ್ಲೆಯ ಜನರ ನಿದ್ದೆ‌ ಕೆಡಿಸಿದ್ದ ನಿಲೋಗಲ್ ಗ್ರಾಮದ 18 ಜನರ ಸ್ಯಾಂಪಲ್‌ಗಳ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ನಿರಾಳರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮೇ 6ರಂದು 13 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರ ಪೈಕಿ ಸೋಂಕು ದೃಢಪಟ್ಟಿರುವ ವ್ಯಕ್ತಿಯೊಬ್ಬನ ಮಗಳ ಮದುವೆ ಈಚೆಗೆ ನಡೆದಿತ್ತು. ಆ ಮದುವೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೊಗಲ್ ಗ್ರಾಮದ ಸುಮಾರು 20 ಜನರು ಪಾಲ್ಗೊಂಡಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿತ್ತು. ಈ ಮಾಹಿತಿಯನ್ನರಿತ ಜಿಲ್ಲಾಡಳಿತ ತಕ್ಷಣವೇ ಅಧಿಕಾರಿಗಳ ತಂಡವನ್ನು ನಿಲೋಗಲ್ ಗ್ರಾಮಕ್ಕೆ ಕಳುಹಿಸಿ, ಮದುವೆಯಲ್ಲಿ ಪಾಲ್ಗೊಂಡಿದ್ದ 18 ಜನರನ್ನು ಕ್ವಾರಂಟೈನ್ ಮಾಡಿ, ಅವರ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳಿಸಿತ್ತು.

ಕೈ ಕೊಟ್ಟ ಲ್ಯಾಬ್; ತಡವಾದ ವರದಿ
ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ನಿಲೋಗಲ್ ಪ್ರಕರಣದ ವರದಿಗೆ ಇಡೀ ಜಿಲ್ಲೆಯ ಕಾದು ಕುಳಿತಿತ್ತು. ಹಸಿರು ವಲಯದಲ್ಲಿರುವ ಕೊಪ್ಪಳ ಕೇಸರಿ ವಲಯಕ್ಕೆ ಬರುತ್ತಾ ಎನ್ನುವ ಆತಂಕ ಜನರಲ್ಲಿತ್ತು.

ಹಾಗಾಗಿ ಮೇ 8 ರಂದು ಬರಬೇಕಿದ್ದ ವರದಿ ಬಗ್ಗೆ ಸಿಕ್ಕಾಪಟ್ಟೆ‌ ಕುತೂಹಲ ಇತ್ತು. ಮೊದಲು ಎಲ್ಲ ಸ್ಯಾಂಪಲ್‌ಗಳನ್ನು ಬೆಂಗಳೂರಿನ ಲ್ಯಾಬ್‌ಗೆ ಕಳಿಸಲಾಗುತ್ತಿತ್ತು. ಆದ್ದರಿಂದ ಫಲಿತಾಂಶಕ್ಕಾಗಿ ಎರಡು ದಿನ ಕಾಯಬೇಕಿತ್ತು. ಕೆಲ ಜಿಲ್ಲೆಗಳ ಈ ಪರಿಸ್ಥಿತಿ ಅರಿತ ಸರಕಾರ ಬಳ್ಳಾರಿಯಲ್ಲಿ ಕೋವಿಡ್-19 ಲ್ಯಾಬೋರೇಟರಿ ಆರಂಭಿಸಿತ್ತು. ಮೇ 7 ರವರೆಗೆ ಲ್ಯಾಬ್ ಸರಿಯಾಗೇ ಇತ್ತು. ಆನಂತರ ಲ್ಯಾಬ್‌ನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡಿದ್ದರಿಂದ ಬಳ್ಳಾರಿ ಲ್ಯಾಬ್‌ಗೆ ಬರುತ್ತಿದ್ದ ಮೂರ್ನಾಲ್ಕು ಜಿಲ್ಲೆಗಳ ಸ್ಯಾಂಪಲ್ಸ್ ಅನಿವಾರ್ಯವಾಗಿ ಬೆಂಗಳೂರಿಗೆ ಹೋಗಬೇಕಾಯಿತು. ಅಲ್ಲಿ ಕೊಪ್ಪಳ ಜಿಲ್ಲೆಯ ಸರದಿ ಬರುವುದು ತಡವಾಗಿ ‌ಕೊನೆಗೂ ಮೇ 9ರ ರಾತ್ರಿ ಕೊಪ್ಪಳ ಜಿಲ್ಲೆಯ ಸ್ಯಾಂಪಲ್ಸ್ ಫಲಿತಾಂಶ ಬಂದಿದ್ದು ಎಲ್ಲವೂ ನೆಗೆಟಿವ್ ಬಂದಿವೆ. 

ಈವರೆಗೂ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಜಿಲ್ಲೆಯ ಜನರು ಆತಂಕಕ್ಕೊಳಗಾಗಬೇಡಿ. ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮನವಿ ಮಾಡಿದ್ದಾರೆ. ಆದರೂ ಜನ ಸಾಮಾಜಿಕ ಅಂತರ ಮರೆಯುತ್ತಿದ್ದಾರೆ. ಎಲ್ಲ ಪ್ರದೇಶಗಳಲ್ಲೂ ಜನದಟ್ಟಣೆ ಹೆಚ್ಚುತ್ತಿದೆ. ಭವಿಷ್ಯದ ದಿನಗಳಲ್ಲಿ ಜನರ ಈ ನಿರ್ಲಕ್ಷ್ಯ ಧೋರಣೆಯೇ ಶಾಪವಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ.

ವರದಿ: ಬಸವರಾಜ ಕರುಗಲ್

SCROLL FOR NEXT