ರಾಜ್ಯ

ನೀರುಪಾಲಾದ ರಾಶಿ ಮಾಡಿದ್ದ ಭತ್ತ: ರೈತರಿಗೆ ತಪ್ಪದ ಸಂಕಷ್ಟ

Srinivas Rao BV

ಗಂಗಾವತಿ: ಒಮ್ಮೆ ಬರಗಾಲ, ಮೊತ್ತೊಮ್ಮೆ ಬೆಲೆ ಕುಸಿತ, ಮಗದೊಮ್ಮೆ ನೀರಿನ ಸಮಸ್ಯೆ ಹೀಗೆ ಸಮಸ್ಯೆಗಳ ಸಾಲುಸಾಲು ರೈತನ ಬೆನ್ನು ಬಿದ್ದಿದ್ದು, ಇದೀಗ ಎರಡನೇ ಬೆಳೆದ ರೈತ ಇನ್ನೆನು ಮಾರುಕಟ್ಟೆಗೆ ಭತ್ತ ಸಾಗಿಸಬೇಕು ಎನ್ನುವಷ್ಟರಲ್ಲಿ ಮಳೆರಾಯ ಕಟ್ಟಿ ಕಾಡುತ್ತಿದ್ದಾನೆ.

ಕಾರಟಗಿ ತಾಲ್ಲೂಕಿನ ಸಿದ್ದಾಪುರ ಹೋಬಳಿಯ ತುಂಗಭದ್ರಾ ನದಿ ಪಾತ್ರದಲ್ಲಿ ಬರುವ ಬೆನ್ನೂರು, ಶಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ ಮೊದಲಾದ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.ಈಗಾಗಲೆ ಶಾಸಕ, ಸಚಿವರ ಮೂಲಕ ಸಕರ್ಾರಕ್ಕೆ ಬೇಡಿಕೆ ಇಟ್ಟು, ಹೋರಾಟವೂ ಮಾಡಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಎರಡನೇ ಬೆಳಗೆ ನೀರು ಪಡೆದುಕೊಂಡ ರೈತರು, ಎರಡನೇ ಬೆಳೆಯಾಗಿ ಭತ್ತ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಭಾನುವಾರ ಸುರಿದ ಅಕಾಲಿಕ ಮಳೆಯಿಂದಾಗಿ ಸುಮಾರು ನಾಲ್ಕಕ್ಕೂ ಹೆಚ್ಚು ಗ್ರಾಮಗಳ ರೈತರು ಬೆಳೆದ ಒಂದು ಸಾವಿರ ಹೆಕ್ಟೇರು ಪ್ರದೇಶದಲ್ಲಿನ ಭತ್ತ ನೀರು ಪಾಲಾಗಿದೆ. ಕೆಲವರು ಭತ್ತವನ್ನು ರಾಶಿ ಮಾಡಿ ಹಾಕಿದ್ದರು.

ಇನ್ನು ಕೆಲವರು ನಾಳೆ, ನಾಡಿದ್ದು ಭತ್ತದ ಕೊಯ್ಲಿಗೆ ಸಿದ್ಧತೆ ನಡೆಸಿದ್ದರು. ಆದರೆ ಅಷ್ಟರಲ್ಲಿಯೇ ಭಾನುವಾರ ಮಧ್ಯಾಹ್ನ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಇದಕ್ಕೂ ಮೊದಲು ಏಪ್ರಿಲ್ ಮೊದಲ ವಾರದಲ್ಲಿ ಸುರಿದ ಮಳೆಗೆ ಸುಮಾರು 35 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಭತ್ತ ನಾಶವಾಗಿತ್ತು. ಅದಕ್ಕೂ ಮೊದಲು ಮರಳಿ ಹೋಬಳಿ ಕಲ್ಗುಡಿ, ಮರಳಿ, ಜೀರಾಳ ಕಲ್ಗುಡಿ ಮೊದಲಾದ ಗ್ರಾಮಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಕೇವಲ 40 ದಿನದ ಭತ್ತದ ಸಸಿಯಲ್ಲಿ ತೆನೆಯೊಡೆದ ಪರಿಣಾಮ ನೂರಾರು ರೈತರು ಹಾನಿಗೀಡಾಗಿದ್ದರು.

ಕಳೆದ ಐದು ವರ್ಷಗಳಿಂದ ಕೇವಲ ಏಕ ಬೆಳೆಗೆ ಸೀಮಿತವಾಗಿದ್ದ ಈ ಭಾಗದ ರೈತರು ಈ ವರ್ಷ ಎರಡನೇ ಬೆಳೆ ಬೆಳೆದಿದ್ದಾರೆ. ಇನ್ನೆನು ಫಸಲು ಕೈಗೆ ಬಂತು ಎನ್ನುವಷ್ಟರಲ್ಲಿ ಪ್ರಕೃತಿ ಮುನಿಸಿಕೊಳ್ಳುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ವರದಿ: ಶ್ರೀನಿವಾಸ ಎಂ.ಜೆ

SCROLL FOR NEXT