ರಾಜ್ಯ

ಕೊರೋನಾ ಗೆದ್ದ ಮೈಸೂರು: ಎಲ್ಲಾ 88 ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

Lingaraj Badiger

ಬೆಂಗಳೂರು: ವಿಶ್ವವನ್ನೇ ಅಲ್ಲೋಲಕಲ್ಲೋಲವಾಗಿಸಿರುವ ಮಾರಣಾಂತಿಕ ಕೊರೋನಾ ಸೋಂಕನ್ನು ಮೆಟ್ಟಿ ನಿಲ್ಲುವಲ್ಲಿ ಅರಮನೆ ನಗರಿ ಮೈಸೂರು ಯಶಸ್ವಿಯಾಗಿದೆ. ಜಿಲ್ಲೆಯಲ್ಲಿ ದಾಖಲಾಗಿದ್ದ ಎಲ್ಲಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ.

ಇದು ಜಿಲ್ಲಾಡಳಿತದ ಉತ್ತಮ ಕ್ರಮಗಳ ಫಲ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರನೋರ್ವನಿಗೆ ತಗುಲಿದ ಕೊರೋನಾ ಸೋಂಕು ಬರೋಬ್ಬರಿ 88 ಜನರಿಗೆ ವ್ಯಾಪಿಸಿತ್ತು. ಇದರಿಂದ ಮೈಸೂರು ಕೆಂಪು ವಲಯ ಹಾಗೂ ಅತಿ ಸೂಕ್ಷ್ಮ ಜಿಲ್ಲೆಯಾಗಿ ಗುರುತಿಸಿಕೊಂಡಿತ್ತು.

ಆದರೆ, ಕೆಲ ದಿನಗಳಿಂದ ಅಲ್ಲಿ ಯಾವುದೇ ಸೋಂಕು ಪತ್ತೆಯಾಗಿರಲಿಲ್ಲ. 88 ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಶುಕ್ರವಾರ ಕೊನೆಯ ಇಬ್ಬರು ಸೋಂಕಿತರು ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. 

ಇನ್ನು 28 ದಿನಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಸೋಂಕಿನ ಪ್ರಕರಣಗಳು ವರದಿಯಾಗದಿದ್ದರೆ, ಮೈಸೂರು ಹಸಿರು ವಲಯವಾಗಿ ಬದಲಾಗಲಿದೆ.

SCROLL FOR NEXT