ರಾಜ್ಯ

ರಾಜ್ಯಕ್ಕೆ 'ಮಹಾ' ಕೊರೋನಾಘಾತ: ನಿನ್ನೆ ಸೋಂಕು ಪತ್ತೆಯಾದ 70 ಮಂದಿ ಪೈಕಿ 40 ಮಂದಿಗೆ ಮಹಾರಾಷ್ಟ್ರ ನಂಟು

Manjula VN

ಬೆಂಗಳೂರು: ಕೊರೋನಾ ಸೋಂಕು ಹೆಚ್ಚಳಕ್ಕೆ ತಬ್ಲಿಘಿ, ಅಜ್ಮೇರ್ ನಂತರ ಇದೀಗ ರಾಜ್ಯಕ್ಕೆ ಮಹಾರಾಷ್ಟ್ರದ ಆಘಾತ ಎದುರಾಗಿದೆ. ರಾಜ್ಯದಲ್ಲಿ ಭಾನುವಾರ 70 ಮಂದಿಯಲ್ಲಿ ಹೊಸದಾಗಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ಪೈಕಿ 40 ಮಂದಿ ಮಹಾರಾಷ್ಟ್ರದಿಂದ ವಾಪಸ್ಸಾದವರಾಗಿದವರೇ ಆಗಿದ್ದಾರೆ. 

ಒಂದೇ ದಿನ ಬರೋಬ್ಬರಿ 70 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಇದೇ ಮೊದಲಾಗಿದೆ. ಈ ವರೆಗೆ ಮೇ 15 ರಂದು 69 ಪ್ರಕರಣಗಳು ದಾಖಲಾಗಿದ್ದು ದಾಖಲೆಯಾಗಿತ್ತು.

ಮಂಡ್ಯ ಜಿಲ್ಲೆಯಲ್ಲಿಯೇ ಅತೀ ಹೆಚ್ಚು 22, ಬೆಂಗಳೂರಿನಲ್ಲಿ 15, ಕಲಬುರಗಿ 10, ಹಾಸನ 6, ಧಾರವಾಡ 4, ಯಾದಗಿರಿ, ಕೋಲಾರ ತಲಾ 3, ಶಿವಮೊಗ್ಗ, ದಕ್ಷಿಣ ಕನ್ನಡ ತಲಾ 2, ವಿಜಯಪುರ, ಉಡಪು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ. 

ನಿನ್ನೆ ಸಂಜೆ 5 ಗಂಟೆಯವರೆಗೂ 55 ಪ್ರಕರಣಗಳು ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಿಸಿತ್ತು. ಈ ಪ್ರಕಟಣೆಯಲ್ಲಿ ಬೆಂಗಳೂರಿನಲ್ಲಿ ಒಂದೂ ಕೊರೋನಾ ಸೋಂಕು ವರದಿಯಾಗಿರಲಿಲ್ಲ. ಆದರೆ , ರಾತ್ರಿ ಬಂದ ವರದಿಯಲ್ಲಿ ಶಿವಾಜಿನಗರದಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಯ ಸಂಪರ್ಕದಿಂದ ಮತ್ತೆ 15 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ. ಇದರಿಂದ ಭಾನುವಾರದ ಒಟ್ಟು ಸೋಂಕಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಶನಿವಾರದವರೆಗೂ ಈ ಹೌಸ್ ಕೀಪಿಂಗ್ ವ್ಯಕ್ತಿಯಿಂದ 29 ವ್ಯಕ್ತಿಗಳಿಗೆ ಸೋಂಕು ಹರಡಿತ್ತು. 

SCROLL FOR NEXT