ರಾಜ್ಯ

ವೈರಸ್ ಸಮುದಾಯ ಹಂತ ತಲುಪಲು ಕಣ್ತಪ್ಪಿಸಿ ರಾಜ್ಯ ಪ್ರವೇಶಿಸುತ್ತಿರುವ ಪ್ರಯಾಣಿಕರೇ ಕಾರಣ: ತಜ್ಞರು

Manjula VN

ಬೆಂಗಳೂರು: ಕೊರೋನಾ ಸೋಂಕು ತಡೆಯುವ ಸಲುವಾಗಿ ಹೊರ ರಾಜ್ಯ ಪ್ರಯಾಣದ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲೇ ಅಧಿಕಾರಿಗಳ ಕಣ್ತಪ್ಪಿಸಿ ರಾಜ್ಯ ಪ್ರವೇಶಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. 

ಸೇವಾ ಸಿಂಧು ಆ್ಯಪ್ ಮೂಲಕ ತಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳದ ಜನರು, ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ನಿಯಂತ್ರಿಸಿ ರಾಜ್ಯ ಪ್ರವೇಶಿಸುತ್ತಿದ್ದಾರೆ. ಇಂತಹವರ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ಬಳಿ ಮಾಹಿತಿಯೇ ಇಲ್ಲ. 

ಸೇವಾ ಆ್ಯಪ್ ಮೂಲಕ ದಾಖಲಿಸಿಕೊಂಡು ರಾಜ್ಯಕ್ಕೆ ಬರುತ್ತಿರುವವರ ವಿವರಗಳಷ್ಟೇ ನಮ್ಮ ಬಳಿಯಿದೆ. ಕೆಲವರು ತಪಾಸಣೆಗಳಿಲ್ಲದೆ, ರಹಸ್ಯ ದಾರಿಗಳಲ್ಲಿ ರಾಜ್ಯ ಪ್ರವೇಶಿಸುತ್ತಿದ್ದಾರೆ. ಇಂತಹ ಘಟನೆಗಳಿಂದ ವೈರಸ್ ಸಮುದಾಯ ಹಂತ ತಲುಪಬಹುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

ವೈರಾಣುತಜ್ಞ ಡಾ.ಜಾನ್ ಜಾಕೋಬ್ ಅವರು ಮಾತನಾಡಿ, ಸರ್ಕಾರ ಏನನ್ನು ಸಮರ್ಥಿಸಿಕೊಳ್ಳುತ್ತಿದೆ ಎಂಬುದು ಮುಖ್ಯವಲ್ಲ. ವೈರಸ್ ಸಮುದಾಯ ಹಂತ ತಲುಪುವುದಂತೂ ಖಚಿತ. ಜನರಿಗೆ ನಾವು ಈ ಬಗ್ಗೆ ಶಿಕ್ಷಣ ನೀಡಬೇಕಿದೆ. ಲಕ್ಷಣಗಳು ಬಂದಾಗ ಏನನ್ನು ಮಾಡಬೇಕೆಂಬುದನ್ನು ವಿವರಿಸಬೇಕಿದೆ ಎಂದು ಹೇಳಿದ್ದಾರೆ. 

ವಾರ್ ರೂಮ್ ಗಳು ನೀಡಿರುವ ಅಂಕಿಅಂಶಗಳ ಪ್ರಕಾರ, ಮೇ 16 ರ ಹೊತ್ತಿಗೆ ಸುಮಾರು 1.4 ಲಕ್ಷ ಕುಟುಂಬಗಳ 2.5 ಲಕ್ಷ ಜನರು ರಾಜ್ಯಕ್ಕೆ ಬರಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಆದರೆ, ಸಾಕಷ್ಟು ಮಂದಿ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ ರಾಜ್ಯ ಪ್ರವೇಶಿಸಿದ್ದಾರೆ. ಇದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಇದು ಸತ್ಯವಲ್ಲ. ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದೇರೆ. ಚೆಕ್ ಪೋಸ್ಟ್ ಗಳಲ್ಲಿ ಸೂಕ್ತ ರೀತಿಯಲ್ಲಿ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಅಕ್ರಮ ಪ್ರವೇಶ ಆರೋಪಗಳನ್ನು ತಿರಸ್ಕರಿಸಿದ್ದಾರೆ. 

SCROLL FOR NEXT