ರಾಜ್ಯ

ಲಾಕ್ಡೌನ್ ಇದ್ದರೂ ಮಹದೇಶ್ವರ ಬೆಟ್ಟ ಕಾಡು ಕಾಲು ದಾರಿಗಳ ಮೂಲಕ ಬರುತ್ತಿದ್ದ ತಮಿಳರಿಗೆ ಕಡಿವಾಣ!

Manjula VN

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಕಾಡು ಕಾಲು ದಾರಿಗಳ ಮೂಲಕ ತಮಿಳುನಾಡಿನಿಂದ ಅಕ್ರಮವಾಗಿ ಬರುತ್ತಿದ್ದ ವಲಸಿಗರಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿದೆ. ಕಾಡು ಕಾಲು ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಕಳ್ಳದಾರಿಗಳಿಗೆ ಅಡ್ಡಲಾಗಿ ಮುಳ್ಳುಬೇಲಿ ಹಾಕಲಾಗಿದೆ. ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್, ಹೂಗ್ಯಂ, ಜಲ್ಲಿಪಾಳ್ಯ, ಗಾಜನೂರು, ಗರಿಕೆಕಂಡಿ ರಸ್ತೆಗಳನ್ಮು ಸಂಪೂರ್ಣ ಬಂದ್ ಮಾಡುವ ಮೂಲಕ ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ.

ದೇಶದಲ್ಲೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಿ‌ಂದ ಬರುವ ವಲಸಿಗರಿಗೆ ಚಾಮರಾಜನಗರ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಅಲ್ಲದೆ ತಮಿಳುನಾಡಿನಿಂದ ಪ್ರವೇಶ ನಿರ್ಬಂಧಿಸಿ ಚೆಕ್ ಪೋಸ್ಟ್​​ಗಳಲ್ಲಿ ಬಿಗಿಯಾದ ಕ್ರಮ ಕೈಗೊಂಡಿತ್ತು. ಈ ಹಿನ್ನಲೆಯಲ್ಲಿ ತಮಿಳರು ಮಹದೇಶ್ವರ ಬೆಟ್ಟದ ಕಾಡಿನ ಕಾಲು ದಾರಿಗಳ ಮೂಲಕ ಕಾಲ್ನಡಿಗೆಯಲ್ಲಿ ಬರತೊಡಗಿದ್ದರು. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ನಿವಾಸಿಗಳು ಸಹ ಅಡ್ಡದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದರು.

ಪಾಲಾರ್ ನದಿಯ ಪಕ್ಕದಲ್ಲೇ ಚೆಕ್ ಪೋಸ್ಟ್ ಇದ್ದರೂ ಪೊಲೀಸರ ಕಣ್ತಪ್ಪಿಸಿ ಓಡಾಟ ನಡೆಸಲಾಗುತ್ತಿತ್ತು. ವ್ಯಾಪಾರ, ವಹಿವಾಟು, ಆಸ್ಪತ್ತೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ಎರಡು ರಾಜ್ಯಗಳ ನಡುವೆ ಸಂಚರಿಸುವ ಮೂಲಕ ಚಾಮರಾಜನಗರ ಜಿಲ್ಲೆಗೆ ಕೊರೋನ ಅರಳುವ ಭೀತಿಯನ್ನು ಹುಟ್ಟು ಹಾಕಿದ್ದರು. ಇದನ್ನು ಜಿಲ್ಲಾಡಳಿತದ ಗಮನಕ್ಕೆ ಸಾರ್ವಜನಿಕರು ತಂದಾಗ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತವು ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಏಡುಕೊಂಡಲ ರವರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕಳ್ಳ ದಾರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಅಲ್ಲಿಗೆ ಅರಣ್ಯ ಇಲಾಖಾಧಿಕಾರಿಗಳ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.


ವರದಿ: ಗುಳಿಪುರ ನಂದೀಶ

SCROLL FOR NEXT