ರಾಜ್ಯ

'ಜೈ ಶ್ರೀರಾಮ್' ಜಪಿಸಲು ಒತ್ತಾಯ: ನಾಲ್ವರ ವಿರುದ್ಧ ಪ್ರಕರಣ ದಾಖಲು

Srinivasamurthy VN

ಬಂಟ್ವಾಳ: ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ 'ಜೈ ಶ್ರೀ ರಾಮ್' ಎಂದು ಜಪಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ವಿಟ್ಲ ಪೊಲೀಸರು ಭಜರಂಗದಳದ ಮುಖಂಡ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ಕನ್ಯಾನ ನಿವಾಸಿ ಭಜರಂಗದಳದ ನಾಯಕ ದಿನೇಶ್ ಮತ್ತು ಕೊಲ್ನಾಡು ಗ್ರಾಮದ 16 ವರ್ಷದ ಇಬ್ಬರು ಹಾಗೂ ಕನ್ಯಾನ ಗ್ರಾಮದ 17 ವರ್ಷದ ಓರ್ವ ಅಪ್ರಾಪ್ತರು ಎಂದು ಗುರುತಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಹಲ್ಲೆಗೆ ಒಳಗಾದವನನ್ನು ಕುಡ್ತುಮುಗುರುವಿನ ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಏಪ್ರಿಲ್ 21 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ವಿದ್ಯಾರ್ಥಿಯ ಬೈಕ್‌ಗೆ ಅಡ್ಡಹಾಕಿ ಆತನನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಕಾಡುಮಠ  ಪ್ರೌಢ ಶಾಲಾ ಮೈದಾನಕ್ಕೆ ಎಳೆದೊಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿದ್ದಾರೆ.

ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಂತ್ರಸ್ತ ಯುವಕ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

SCROLL FOR NEXT