ರಾಜ್ಯ

ನವೆಂಬರ್, ಡಿಸೆಂಬರ್ ನಲ್ಲಿ ಬದಲಾದ ಸ್ವರೂಪದಲ್ಲಿ ಮತ್ತೆ 'ಸಪ್ತಪದಿ'ಗೆ ಚಾಲನೆ

Srinivasamurthy VN

ಬೆಂಗಳೂರು: ನವೆಂಬರ್, ಡಿಸೆಂಬರ್ ನಲ್ಲಿ ಬದಲಾದ ಸ್ವರೂಪದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಪ್ತಪದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, 'ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಮುಂದೂಡಲ್ಪಟ್ಟಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಈಗ ಕೋವಿಡ್ -19 ಪ್ರೋಟೋಕಾಲ್‌ಗಳ ಪ್ರಕಾರ ನವೆಂಬರ್ ಮತ್ತು  ಡಿಸೆಂಬರ್‌ನಲ್ಲಿ ನಡೆಯಲಿದೆ. ದತ್ತಿ ಇಲಾಖೆ ವ್ಯಾಪ್ತಿಗೆ ಬರುವ 100 ದೇವಾಲಯಗಳಲ್ಲಿ ವಿವಿಧ ದಿನಾಂಕಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯಲಿದ್ದು, ಜನಸಂದಣಿಯನ್ನು ತಡೆಯಲು ಪ್ರತಿ ದೇವಾಲಯದಲ್ಲಿ ದಂಪತಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ.

ಈ ಹಿಂದೆ ಏಪ್ರಿಲ್ 26 ಮತ್ತು ಮೇ 24 ರಂದು ರಾಜ್ಯಾದ್ಯಂತ 100 ದತ್ತಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ, ಅದನ್ನು ಜೂನ್ ಮತ್ತು ಜುಲೈಗೆ ಮುಂದೂಡಲಾಯಿತು, ಅದನ್ನು ಮತ್ತೆ  ಮುಂದೂಡಲಾಯಿತು. ಸಪ್ತಪದಿ ಯೋಜನೆಯಡಿ, ಮದುಮಗನಿಗೆ ಶರ್ಟ್ ಮತ್ತು ಧೋತಿ ಮತ್ತು 5,000 ರೂ. ನಗದು, ವಧು ಸೀರೆ, 1,000 ರೂ ನಗದು ಮತ್ತು 8 ಗ್ರಾಂ ಚಿನ್ನವನ್ನು ‘ಮಾಂಗಲ್ಯ’ಕ್ಕಾಗಿ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. 

ಇದೀಗ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ನವೆಂಬರ್-ಅಂತ್ಯ ಮತ್ತು ಡಿಸೆಂಬರ್ ನಡುವೆ ಅನೇಕ ದಿನಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲು ಯೋಜನೆ ಯೋಜಿಸಿದೆ. ಶುಭ ದಿನಾಂಕಗಳನ್ನು ಹುಡುಕಲಾಗುತ್ತಿದ್ದು ಶೀಘ್ರ ಈ ಬಗ್ಗೆ ಮಾಹಿತಿ  ನೀಡುತ್ತೇವೆ. ಈ ಮೊದಲು ಸಾಕಷ್ಟು ಸಂಖ್ಯೆಯಲ್ಲಿ ಜೋಡಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ಸಂದರ್ಭವಾದ್ದರಿಂದ ನಿಗದಿತ ಜೋಡಿಗಳಿಗಷ್ಟೇ ಸಾಮೂಹಿಕ ವಿವಾಹ ಸೀಮಿತವಾಗಿರುತ್ತದೆ. ನಾವು ಈಗ ಸುಮಾರು 250 ಜೋಡಿಗಳನ್ನು ನೋಂದಾಯಿಸಿಕೊಂಡಿರಬಹುದು.

ವಿವಾಹದ  ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ವಧು-ವರರ ಜೊತೆ ತಲಾ ಇಬ್ಬರು ಜನರು ಹಾಜರಾಗಬಹುದು. ದೇವಾಲಯಗಳಲ್ಲಿ ಲಭ್ಯವಿರುವ ಸ್ಥಳವನ್ನು ಅವಲಂಬಿಸಿ, 15 ರಿಂದ 25 ದಂಪತಿಗಳಿಗೆ ಸಾಮೂಹಿಕ ವಿವಾಹಕ್ಕೆ ಅವಕಾಶ  ನೀಡಲಾಗುವುದು, ಇದರಿಂದ ಜನರ ಸಂಖ್ಯೆ 100 ರಿಂದ 125 ಮೀರಬಾರದು ಎಂದು ಸಚಿವರು ಹೇಳಿದರು. 

SCROLL FOR NEXT