ರಾಜ್ಯ

ಅಕ್ರಮ ಆಸ್ತಿ ಗಳಿಕೆ: ಕೆಎಎಸ್ ಅಧಿಕಾರಿ ಡಾ. ಬಿ.ಸುಧಾಗೆ ಸೇರಿದ 6 ಸ್ಥಳಗಳ ಮೇಲೆ ಎಸಿಬಿ ದಾಳಿ

Srinivasamurthy VN

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ, ಫ್ಲ್ಯಾಟ್, ಕಚೇರಿ ಸೇರಿ ಏಕ ಕಾಲದಲ್ಲಿ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಬೆಂಗಳೂರಿನ ಕೊಡಿಗೇಹಳ್ಳಿ ತಿಂಡ್ಲು ಮುಖ್ಯರಸ್ತೆಯಲ್ಲಿರುವ ನಿವಾಸ, ಯಲಹಂಕ ನೆಹರೂ ಶಿವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಫ್ಯ್ಲಾಟ್, ಬಳ್ಳಾರಿ ರಸ್ತೆ ಬ್ಯಾಟರಾಯನಪುರದಲ್ಲಿರುವ ಪರಿಚಿತರ ಮನೆ, ಬಿಇಎಂಎಲ್ ನ ಮೈಸೂರು ನಗರ ಶ್ರೀರಾಂಪುರದಲ್ಲಿರುವ ಪರಿಚಿತರ ಮನೆ, ಉಡುಪಿ ಜಿಲ್ಲೆಯ ಹೆಬ್ರಿ ರಸ್ತೆಯ ಚಂತಾರ್ ತೆಂಕಬೆಟ್ಟದಲ್ಲಿರುವ ಪರಿಚಿತರ ವಾಸದ ಮನೆ, ಹಾಗೂ ಸುಧಾ ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಂತಿನಗರದಲ್ಲಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತಾಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿ ಪರಿಶೀಲನೆ ‌ಮಾಡುತ್ತಿದ್ದಾರೆ.

ಸುಧಾ ಅವರು ಈ ಹಿಂದೆ ಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಐಟಿ-ಬಿಟಿ ಆಡಳಿತಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಸಾರ್ವಜನಿಕರೊಬ್ಬರು, ಅಕ್ರಮ ಆಸ್ತಿಗಳಿಗೆ ಮತ್ತು ಅವ್ಯವಹಾರ ಸಂಬಂಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಂದು ಎಸಿಬಿ ಬೆಂಗಳೂರು ನಗರ ವಿಭಾಗ ಮತ್ತು ವಿವಿಧ ಜಿಲ್ಲೆಯ ತಂಡಗಳು ದಾಳಿ ನಡೆಸಿವೆ.

ಸುಧಾ ಅವರು ಹೊಂದಿರುವ ಆಸ್ತಿ ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರಿದಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT