ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕೊರೋನಾ ಲಸಿಕೆ ದಾಸ್ತಾನು ಸಂಗ್ರಹ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತಿಸಿದೆ.
ಚಿತ್ರದುರ್ಗದಲ್ಲಿ ಲಸಿಕೆ ಸಂಗ್ರಹ ಕೇಂದ್ರ ಸ್ಥಾಪನೆಯಾಗುವುದರಿಂದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಮತ್ತು ಕೊಪ್ಪಳ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಲಸಿಕಾ ಸಂಗ್ರಹ ಕೇಂದ್ರದಲ್ಲಿ ಒಂದು ಬಾರಿಗೆ 10 ಲಕ್ಷ ಡೊಸೇಜ್ ವ್ಯಾಕ್ಸಿನ್ ಸಂಗ್ರಹಿಸಲು ಸಿದ್ಧತೆ ನಡೆಸಲಾಗುತ್ತಿದೆ.
ದೇಶದಲ್ಲಿ ಕೊರೋನಾ ಲಸಿಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಪ್ರಮುಖ ಲಸಿಕಾ ಸಂಗ್ರಹ ಕೇಂದ್ರದ ಜೊತೆಗೆ ಚಿತ್ರದುರ್ಗದಲ್ಲಿ ಸ್ಥಾಪಿಸಲು ಜಿಲ್ಲಾ ಆರೋಗ್ಯ ಇಲಾಖೆ ಅಗತ್ಯ ತಯಾರಿ ನಡೆಸುತ್ತಿದೆ.
ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗುವುದು, ನಂತರ ಲಸಿಕೆಯನ್ನು ಸಮರ್ಥವಾಗಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಾದೇಶಿಕ ಕೇಂದ್ರದಿಂದ ಲಸಿಕೆಗಳನ್ನು 101 ಕೋಲ್ಡ್ ಸ್ಟೋರೇಜ್ ಪಾಯಿಂಟ್ಗಳ ಮೂಲಕ ತಳಮಟ್ಟದಲ್ಲಿ ಜನರಿಗೆ ವಿತರಿಸಲಾಗುವುದು. ಬೆಂಗಳೂರಿನಿಂದ ಲಸಿಕೆತಂದು ಇಲ್ಲಿ ವಿತರಿಸಿಲಾಗುವುದು, ಇದರ ಜೊತೆಗೆ ಶಿವಮೊಗ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗೂ ವಿತರಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಪಾಲಾಕ್ಷ ಹೇಳಿದ್ದಾರೆ.