ರಾಜ್ಯ

ಜ್ಯೋತಿಷಿ ಮಾತು ಕೇಳಿ ಪತ್ನಿಗೆ ಕಿರುಕುಳ; ಬೆಂಗಳೂರಿನಲ್ಲಿ ನವವಿವಾಹಿತೆ ಆತ್ಮಹತ್ಯೆ

Raghavendra Adiga

ಬೆಂಗಳೂರು: ಜ್ಯೋತಿಷಿ ಮಾತು ಕೇಳಿ ಪತಿ ಮತ್ತು ಕುಟುಂಬದವರು ನೀಡಿದ ಕಿರುಕುಳದಿಂದ ನೊಂದ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.

ಹೆಣ್ಣೂರಿನ ಅಶ್ವಿನಿ (25) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಪತಿ ಯುವರಾಜ್ ಎಂಬಾತನ ಕಿರುಕುಳ ತಾಳಲಾರದೆ ಅಶ್ವಿನಿ (25) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತಿ ಜೊತೆಗೆ ಮನೆಯವರೆಲ್ಲ ಕಿರುಕುಳ ನೀಡಲು ಆರಂಭಿಸಿದ್ದು, ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶೇಷವೆಂದರೆ ಅಶ್ವಿನಿ ಮತ್ತು ಯತಿರಾಜ್ ಅವರದ್ದು ಪ್ರೇಮ ವಿವಾಹವಾಗಿತ್ತು. ಕಾಲೇಜು ದಿನಗಳಿಂದಲ್ಲೇ ಇಬ್ಬರೂ ಪ್ರೀತಿಸುತ್ತಿದ್ದರು. ತಂದೆ ಇಲ್ಲದ ಅಶ್ವಿನಿಯನ್ನು ಮದುವೆಯಾಗುವಂತೆ ಯತಿರಾಜ್ ಕೇಳಿದ್ದ. ಅದರಂತೆ ತಾಯಿಯ ಒಪ್ಪಿಗೆ ಪಡೆದು ಈ ವರ್ಷ ಫೆಬ್ರವರಿಯಲ್ಲಿ ಅಶ್ವಿನಿ ಮದುವೆಯಾಗಿದ್ದರು.

ಎರಡು ತಿಂಗಳು ಕಳೆಯುತ್ತಾ ಕೊರೋನಾ ಕಾರಣದಿಂದ ಯತಿರಾಜ್ ಕೆಲಸ ಕಳೆದುಕೊಂಡಿದ್ದಾನೆ, ಆ ನಂತರ ಸ್ನೇಹಿತರಿಂದಿಗೆ ವ್ಯರ್ಥವಾಗಿ ತಿರುಗಲಾರಂಭಿಸಿದ್ದಾನೆ. ಈ ವಿಚಾರ ದಂಪತಿಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಅಶ್ವಿನಿ ತಾನು ಕೆಲಸ ಮಾಡುತ್ತಿದ್ದು ಆಕೆಯ ಸಂಬಳದಿಂದ ಮನೆ ನಡೆಯುತ್ತಿತ್ತು ಎನ್ನಲಾಗಿದೆ. 

ಈ ವೇಳೆ ಯತಿರಾಜ್ ಸಂಬಂಧಿಗಳು ಜ್ಯೋತಿಷಿಯೊಬ್ಬನ ಸಂಪರ್ಕಿಸಿದ್ದಾರೆ. ಆ ಜ್ಯೀತಿಷಿ ಅಶ್ವಿನಿಗೆ ಎಂದೂ ಮಕ್ಕಳಾಗಲ್ಲ ಎಂದು ಹೇಳಿದ್ದಾನೆ. ಈ ಮಾತನ್ನು ನಂಬಿದ ಯತಿರಾಜ್ ಹಾಗೂ ಆತನ ಮನೆಯವರು ಅಶ್ವಿನಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಹೆಚ್ಚಿನ ವರದಕ್ಷಿಣೆ,  ದುಬಾರಿ ಮೊಬೈಲ್ ಫೋನ್ ಹೀಗೆ ನಾನಾ ಬೇಡಿಕೆ ಇಡುತ್ತಾ ಆಕೆಗೆ ಪದೇ ಪದೇ ಪೀಡಿಸುತ್ತಿದ್ದರು. 

ನವೆಂಬರ್ 13ಕ್ಕೆ ರಾತ್ರಿ ಇಬ್ಬರ ನಡುವೆ ಇದೇ ವಿಚಾರದಲ್ಲಿ ಜಗಳವಾಗಿತ್ತು.  ಆನಂತರ ಶನಿವಾರ ನವೆಂಬರ್ 14ರ ಬೆಳಿಗ್ಗೆ ಯತಿರಾಜ್ ಅಶ್ವಿನಿಯ ಮೇಲೆ ಹಲ್ಲೆ ನಡೆಸಿದ್ದ.  ಇದನ್ನು ಆಕೆ ತನ್ನ ಸೋದರಿಗೆ ಹೇಳಿದ್ದಳೆನ್ನಲಾಗಿದೆ. ಆ ನಂತರ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಯತಿರಾಜ್ ತನ್ನ ಮನೆಯವರಿಗೆ ಕರೆ ಮಾಡಿ ಅಶ್ವಿನಿ ಅನಾರೋಗ್ಯದ ಬಗ್ಗೆ ಹೇಳಿದ್ದಾನೆ. ಅವರು ಬಂದು ಅಶ್ವಿನಿಯನ್ನು ಆಸ್ಪತ್ರೆಗೆ ಸಾಗಿಸುವಷ್ತರಲ್ಲೇ ಅವಳ ಪ್ರಾಣಪಕ್ಷಿ ಹಾರಿ ಹೋಗಿದೆ. 

ಜ್ಯೋತಿಷಿಯ ಮಾತು ಕೇಳಿ ಯುವರಾಜ್ ತನ್ನ ಮಗಳ ಜೀವನ ಹಳು ಮಾಡಿದ್ದಾಗಿ ಅಶ್ವಿನಿ ಪೋಷಕರು ಆರೋಪಿಸಿದ್ದಾರೆ. ಅಶ್ವಿನಿ ತನ್ನ ಕೋಣೆಯಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.  ಘಟನಾ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT