ರಾಜ್ಯ

ಸುಮಲತಾ ಅವರಿಗೆ ನಾಗರಹಾವು ಚಿತ್ರದ ಜಲೀಲನ ಪಾತ್ರ ನೆನಪಾಗಿರಬೇಕು: ಸಂಸದ ಪ್ರತಾಪ ಸಿಂಹ ತಿರುಗೇಟು 

Sumana Upadhyaya

ಮೈಸೂರು: ಸಂಸದರಾದ ಪ್ರತಾಪ ಸಿಂಹ ಮತ್ತು ಸುಮಲತಾ ಅಂಬರೀಷ್ ಮಧ್ಯೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. 

ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಏನೂ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳೊಂದಿಗೆ ಪ್ರತಾಪ ಸಿಂಹ ದೂರವಾಣಿಯಲ್ಲಿ ಮಾತನಾಡುವಾಗ ಹೇಳಿರುವ ಮಾತುಗಳನ್ನೊಳಗೊಂಡ ವಿಡಿಯೊ ವ್ಯಾಪಕ ವೈರಲ್ ಆಗಿತ್ತು. 

ಅದಕ್ಕೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾಗ ಸಂಸದೆ ಸುಮಲತಾ, ಪ್ರತಾಪ ಸಿಂಹ ಪೇಟೆರೌಡಿ ತರ ಮಾನಾಡುತ್ತಾರೆ, ಅವರ ಮಾತುಗಳಿಗೆ ಹೆಚ್ಚು ಬೆಲೆ ಕೊಡುವ ಅಗತ್ಯವಿಲ್ಲ, ನಾನೇನು ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಗೊತ್ತಾದರೆ ಸಾಕು ಎಂದಿದ್ದರು.

ಅದರ ಕುರಿತಂತೆ ನಿನ್ನೆ ಸಂಸದ ಪ್ರತಾಪ ಸಿಂಹ ಅವರಲ್ಲಿ ಪತ್ರಕರ್ತರು ಮತ್ತೆ ಪ್ರಶ್ನೆ ಕೇಳಿದ್ದರು, ಅದಕ್ಕೆ ಪ್ರತಾಪ ಸಿಂಹ, ಸುಮಲತಾ ಅವರು ಹೇಳಿಕೇಳಿ ಸಿನೆಮಾ ಮಂದಿ, ಕಲಾವಿದರು, ಅವರಿಗೆ ನಾಗರಹಾವು ಸಿನಿಮಾದ ಜಲೀಲ ಪಾತ್ರ ನೆನಪಾಗಿ ಡೈಲಾಗ್ ಹೊಡೆದಿರಬೇಕು, ಅಂತಹ ಮಾತುಗಳಿಗೆ ನೀವು ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದಿದ್ದರು. 

ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು, ನಮ್ಮ ಕುಟುಂಬವಷ್ಟೆ ಅಧಿಕಾರಕ್ಕೆ ಬರಬೇಕು ಎಂಬುದು ಪಾಳೇಗಾರಿಕೆ ಸಂಸ್ಕೃತಿ. ಇಂತಹ ಸಂಸ್ಕೃತಿಗೆ ಜನತಂತ್ರದಲ್ಲಿ ಜಾಗವಿಲ್ಲ, ಮಂಡ್ಯ ಕ್ಷೇತ್ರದ ಯಲಿಯೂರಿನ ಜನರು ತಮಗೆ ಅಂಡರ್ ಪಾಸ್ ಬೇಕು ಎಂದು ಕೇಳಿದರು, ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಎಲ್ಲೆಲ್ಲಿ ಅಂಡರ್ ಪಾಸ್, ಮೇಲ್ಸೇತುವೆ ಬೇಕು ಎಂಬ ಪ್ರಸ್ತಾವ ಕೊಡಿ ಎಂದು ಸುಮಲತಾ ಅವರನ್ನು ಕೇಳಿದೆ, ಇದರಲ್ಲೇನು ತಪ್ಪಿದೆ, ನಾನು ಯಾವ ಸ್ಟಾರೂ ಅಲ್ಲ, ನನಗೆ ಮತ ಹಾಕಲು ಯಾವ ಅಭಿಮಾನಿಗಳೂ ಇಲ್ಲ, ನನಗೆ ನನ್ನ ಕೆಲಸವೇ ಶ್ರೀರಕ್ಷೆ ಎಂದು ಪ್ರತಾಪ ಸಿಂಹ ಸುಮಲತಾ ಅವರಿಗೆ ತಿರುಗೇಟು ನೀಡಿದರು.

SCROLL FOR NEXT