ರಾಜ್ಯ

ಕೊರೋನಾ ಅಬ್ಬರ ಇಳಿದರೂ ಪ್ರವಾಸಿ ತಾಣಗಳತ್ತ ಮುಖ ಮಾಡದ ಪ್ರವಾಸಿಗರು: ಸಂಕಷ್ಟದಲ್ಲಿ ಮೈಸೂರು ಪ್ರವಾಸೋದ್ಯಮ!

Srinivasamurthy VN

ಮೈಸೂರು: ಮೈಸೂರು ಜಿಲ್ಲೆ ಕೊರೋನಾ ಅಬ್ಬರ ಇಳಿಯುತ್ತಿದ್ದರೂ, ಕೊರೋನಾ ವೈರಸ್ ಸೋಂಕಿನಿಂದಾಗಿ ಭೀತಿಗೊಳಗಾಗಿರುವ ಪ್ರವಾಸಿಗರು, ಪ್ರವಾಸಿತಾಣಗಳತ್ತ ಮುಖ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಲ್ಲದೆ ಮೈಸೂರು ಪ್ರವಾಸೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. 

ಮೈಸೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 600ಕ್ಕಿಂತಲೂ ಕಡಿಮೆಯಿದ್ದು, ಪ್ರತೀನಿತ್ಯ ಸೋಂಕಿನ ಪ್ರಕರಣ ಸಂಖ್ಯೆ ಕೂಡ ಇಳಿಕೆಯಾಗುತ್ತಿರುವುದು ಕಂಡಿದೆ. 

ಜನಪ್ರಿಯ ಪ್ರವಾಸಿ ತಾಣವಾಗಿರುವ ಮೈಸೂರಿನ ಅರಮನೆಗೆ ಪ್ರತೀವರ್ಷ 36 ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಕಳೆದ 8 ತಿಂಗಳಿಂದ ಕೇವಲ 1.53 ಲಕ್ಷ ಪ್ರವಾಸಿಗರಷ್ಟ ಭೇಟಿ ನೀಡಿದ್ದಾರೆ. 

ಅನ್'ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಕಳೆದ ಜೂನ್ ತಿಂಗಳಿನಿಂದಲೂ ಅರಮನೆಗೆ ಪ್ರವಾಸಿಗರು ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಆದರೆ, ಸೋಂಕು ಹಾಗೂ ಮರಣ ಪ್ರಮಾಣದ ಸಂಖ್ಯೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. 

ದಸರಾ ಹಬ್ಬದ ಸಂದರ್ಭದಲ್ಲಿಯಾದರೂ ಮತ್ತೆ ಮೊದಲಿನಂತೆಯೇ ಪರಿಸ್ಥಿತಿ ಮರಳಬಹುದು ಎಂದು ಹೋಟೆಲಿಗರು ಮತ್ತು ಟ್ರಾವೆಲ್ ಏಜೆಂಟ್'ಗಳು ವಿಶ್ವಾಸವಿಟ್ಟಿದ್ದರು. ಆದರೆ, ದಸರಾ ಹಬ್ಬದ ಸಂದರ್ಭದಲ್ಲಿ ಹೇರಲಾಗಿದ್ದ ಕೆಲ ನಿರ್ಬಂಧಗಳು ಅವರ ನಿರೀಕ್ಷೆಗಳು ಹುಸಿಯಾಗುವಂತೆ  ಮಾಡಿವೆ. 

ವಾರಾಂತ್ಯದ ದಿನಗಳಲ್ಲಾದರೂ ಪ್ರವಾಸಿಗರು ಬರುತ್ತಾರೆಂದು ನಿರೀಕ್ಷಿಸುತ್ತಿದ್ದೇವೆ. ಆದರೆ, ವಾರಾಂತ್ಯದ ದಿನಗಳಲ್ಲೂ ಪ್ರವಾಸಿಗರು ಆಗಮಿಸುತ್ತಿಲ್ಲ ಎಂದು ಗೈಡ್ ಒಬ್ಬರು ಹೇಳಿದ್ದಾರೆ. 

ಮೈಸೂರಿಗೆ ಪ್ರಯಾಣಿಸಲು ಜನರಿಗೇನೋ ಆಸಕ್ತಿಯಿದೆ. ಆದರೆ, ಸರ್ಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸಿದರೆ ಮಾತ್ರ ಇದು ಸಾಧ್ಯ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಚೇತರಿಕೆಯು ಉತ್ತಮವಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ನಾವು ಎಲ್ಲಾ ಸುರಕ್ಷತಾ ಕ್ರಮಗಳನ್ನು  ತೆಗೆದುಕೊಂಡಿದ್ದೇವೆ ಎಂದು ಟ್ರಾವೆಲ್ ಏಜೆಂಟ್ ಹೇಳಿದ್ದಾರೆ.
 

SCROLL FOR NEXT