ರಾಜ್ಯ

ಹಿರಿಯೂರು ಬಳಿ ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ: 7 ಮಂದಿ ಕಳ್ಳ ಬೇಟೆಗಾರರ ಬಂಧನ

Manjula VN

ಚಿತ್ರದುರ್ಗ: ಹಿರಿಯೂರು ತಾಲೂಕಿನ ಗೌಡನಹಳ್ಳಿ ಅರಣ್ಯ ಪ್ರದೇಶದ ಸರಹದ್ದಿನಲ್ಲಿ ಬೇಟೆಯಾಡಲು ಸಜ್ಜಾಗಿದ್ದ ಹೈಪ್ರೊಫೈಲ್ ವೃತ್ತಿಪರ ಏಳು ಮಂದಿ ವನ್ಯಜೀವಿ ಬೇಟೆಗಾರರನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ಭಾನುವಾರ ಬಂಧಿಸಿದ್ದು, ಅವರಿಂದ ವಿದೇಶಿ ಗನ್'ಗಳು, ಅಪಾರ ಪ್ರಮಾಣದ ಕಾಟ್ರಿಜ್'ಗಳು ಮತ್ತು ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಅಂತರಾಷ್ಟ್ರೀಯ ಖ್ಯಾತಿ ಪ್ರಗತಿಪರ ರೈತ ಶಿವಮೊಗ್ಗ ಮೂಲದ ಪ್ರಫುಲ್ಲ ಚಂದ್ರ ಅವರ ಮಗ ಇಕ್ಷು ಧನ್ವಾ, ಬೆಂಗಳೂರಿನ ಧುವನ್, ಪ್ರತಾಪ್ ಹಾಗೂ ರತ್ನಸ್ವಾಮಿ, ಸಹದೇವ್, ವಿನೋದ್ ಮತ್ತು ಅಪ್ರಾಪ್ತ ಬಾಲಕನೊಬ್ಬ ಬಂಧನಕ್ಕೊಳಗಾಗಿದ್ದಾರೆ. 

ಆರೋಪಿಗಳಿಂದ ಸ್ಕಾರ್ಪಿಯೋ, ಮಹೀಂದ್ರಾ ಜೀಪ್ ಸೇರಿದಂತೆ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವೃತ್ತಿಪರ ಬೇಟೆಗಾರರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾದು ಬಂಧನಕ್ಕೊಳಪಡಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಬೇಟೆಗಾರರಿಂದ ಸಿಕ್ಕ ಗನ್ ಗಳು ಎರಡೂ ಇಲಾಖೆಯ ಸಿಬ್ಬಂದಿಗಳನ್ನೇ ಬೆಚ್ಚಿಬೀಳಿಸುವಷ್ಟು ಅತ್ಯಾಧುನಿಕವಾಗಿವೆ. ಟೆಲಿಸ್ಕೋಪಿಕ್ ಸೈಫರ್ ಗನ್'ಗಳು, ಏರ್ ಗನ್, ಪಾಯಿಂಟ್ 22 ಪಿಸ್ತೂಲ್ ಗಳು, ಪಿಸ್ತೂಲ್ ಮತ್ತು ಗನ್ ಗಳ 50ಕ್ಕೂ ಹೆಚ್ಚು ಕಾಟ್ರಿಜ್ ಗಳು, ಬುಲೆಟ್'ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವು ಅಮೆರಿಕಾ ಮತ್ತು ಸ್ವೀಡನ್ ದೇಶದಲ್ಲಿ ತಯಾರಾದವು ಎಂದು ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT