ರಾಜ್ಯ

ಚಳಿಯ ವಾತಾವರಣ: ಕೋವಿಡ್-19 ಎರಡನೇ ಅಲೆ ಬಗ್ಗೆ ತಜ್ಞರ ಎಚ್ಚರಿಕೆ 

Nagaraja AB

ಬೆಂಗಳೂರು: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಸಂಖ್ಯೆ ಕಡಿಮೆಯಾದಂತೆ ಕಂಡುಬರುತ್ತಿದೆಯಾದರೂ ಚಳಿಗಾಲದ ನಂತರ ಸೋಂಕಿನ ಎರಡನೇ ಅಲೆ ಕಾಣಿಸಿಕೊಳ್ಳಬಹುದೆಂದು ಸಾಂಕ್ರಾಮಿಕ ರೋಗಶಾಸ್ತ್ರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆದಾಗ್ಯೂ, ಎರಡನೇ ಅಲೆಯನ್ನು ಪ್ರತಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ನೋಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾದರೂ ಎಲ್ಲ ರಾಜ್ಯಗಳಲ್ಲಿ ಇದೇ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗದು. ಕರ್ನಾಟಕದಲ್ಲಿ ಮೊದಲ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವಾಗ ಎರಡನೇ ಅಲೆ ಬಗ್ಗೆ ಹೇಳಲಾಗದು ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಕೋವಿಡ್ ನಿರ್ವಹಣೆ ಸಲಹೆಗಾರ ಡಾ. ಡಾ.ಗಿರಿಧರ ಬಾಬು ಹೇಳಿದ್ದಾರೆ.

ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೀತಿ ಆಯೋಗ ಇತ್ತೀಚಿಗೆ ಉಲ್ಲೇಖಿಸಿತ್ತು. ಆದಾಗ್ಯೂ, ದೇಶಾದ್ಯಂತ ನೋಡಿದಾಗ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೆಚ್ಚಾಗಿದ ಸೋಂಕು, ಇದೀಗ ಇಳಿಕೆಯಾಗಿದೆ. ಈ ಸಂಖ್ಯೆಯನ್ನು ಎಲ್ಲಾ ರಾಜ್ಯಗಳಲ್ಲೂ ಒಟ್ಟುಗೂಡಿಸಿ ಯೋಚಿಸಬೇಕಾಗಿದೆ ಎಂದು ಐಸಿಎಂಆರ್ ಸದಸ್ಯ ಹಾಗೂ ವೆಲ್ಲೂರಿನ ಕ್ರಿಸ್ಟಿಯನ್ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ. ಜಾಕಬ್ ಜಾನ್ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚಿಲ್ಲದ ಜಿಲ್ಲೆಗಳು ಮತ್ತು ವಲಯಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅಲ್ಲಿಯೂ ಸಹ ನಿಧಾನಗತಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದೆ ಎಂದು ಡಾ. ಗಿರಿಧರ್ ಬಾಬು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಮಧ್ಯೆ ಮೊದಲ ಅಲೆ ಡಿಸೆಂಬರ್ ಮಾಸಾಂತ್ಯದವರೆಗೂ ಇರಲಿದೆ ಅನಿಸುತ್ತಿದೆ. ಡಿಸೆಂಬರ್ ನಂತರ ಇದು ಕಡಿಮೆಯಾಗಲು ಆರಂಭಿಸಲಿದೆ. ಈ ಕುಸಿತ ಕಂಡುಬರುವ ಹೊತ್ತಿಗೆ, ಎರಡನೇ ಅಲೆ ಬೀಸಿದ್ದರೂ ಸಹ, ಇದು ಹೆಚ್ಚು ಸಮಸ್ಯೆಗೆ ಕಾರಣವಾಗುವುದಿಲ್ಲ,  ಮರಣ ಪ್ರಮಾಣ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಕನಿಷ್ಠ ಪ್ರಮಾಣದಲ್ಲಿ ಹೆಚ್ಚಳ ಆಗಬಹುದು ಎಂದು ಡಾ. ಗಿರಿಧರ ಬಾಬು ತಿಳಿಸಿದ್ದಾರೆ.

SCROLL FOR NEXT