ರಾಜ್ಯ

ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಅಕ್ಕನನ್ನು ಪ್ರೀತಿಸಿದ ಕಾರಣಕ್ಕೆ ತಮ್ಮನಿಂದ ಪ್ರಿಯಕರನ ಹತ್ಯೆ

Lingaraj Badiger

ಬೆಂಗಳೂರು: ಇದೇ ತಿಂಗಳ 5ರಂದು ಹೊನ್ನಘಟ್ಟ ಕೆರೆಯ ಅಂಗಳದ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಶವ ಪ್ರಕರಣವನ್ನು ಭೇದಿಸಿರುವ ದೊಡ್ಡಬೆಳವಂಗಲ ಪೊಲೀಸರು, ಯುವಕನನ್ನು ಕೊಲೆ ಮಾಡಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಯಾದ ಯುವಕನನ್ನು ಪಿ.ಚೇತನ್(20) ಎಂದು ಗುರುತಿಸಲಾಗಿದೆ. ಪ್ರಜ್ವಲ್, ಮಿಥುನ್, ಗಣೇಶ, ನಂದನ್, ಪವನ್ ಎಂಬವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ
ಕೊಲೆಯಾದ ಚೇತನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿಯ ತಮ್ಮ ಆರೋಪಿಗಳಲ್ಲಿ ಒಬ್ಬನಾದ ಪ್ರಜ್ವಲ್ ಗೆ ಇದು ಇಷ್ಟವಿರಲಿಲ್ಲ. ಮಾತ್ರವಲ್ಲ ಚೇತನ್ ನನ್ನು ಹೊಡೆದು ಸರಿಯಾದ ಪಾಠ ಕಲಿಸಬೇಕು ಎಂದು ಪ್ರಜ್ವಲ್ ಆಗಾಗ್ಗ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಈ ಮಧ್ಯೆ ಒಂದು ದಿನ ಚೇತನ್ ಮತ್ತು ಪ್ರಜ್ವಲ್ನ ಅಕ್ಕ ಮನೆ ಬಿಟ್ಟು ಪರಾರಿಯಾಗಿದ್ದರು.
ಇದರಿಂದ ಆಕ್ರೋಶಗೊಂಡ ಪ್ರಜ್ವಲ್ ಸಂಚು ರೂಪಿಸಿ ಸ್ನೇಹಿತ ನಿಖಿಲ್ ಮೂಲಕ ಇಬ್ಬರನ್ನು ವಾಪಸ್ ಕರೆತಂದಿದ್ದನು.

ಹುಟ್ಟುಹಬ್ಬಕ್ಕೆ ಕ್ಯಾಮೆರಾ ಕೊಡಿಸುವುದಾಗಿ ನಂಬಿಸಿ ಚೇತನ್ ನನ್ನು ಸ್ನೇಹಿತನ ಮೂಲಕ ಸಂಚು ರೂಪಿಸಿ ಕರೆಸಿಕೊಂಡ ಆರೋಪಿಗಳು, ಬಳಿಕ ಅಪಹರಿಸಿ ದೊಡ್ಡಬಳ್ಳಾಪುರದ ಹೊನ್ನಾಘಟ್ಟದ ಕೆರೆಯಲ್ಲಿ ಕೊಲೆಗೈದಿದ್ದರು. ನಂತರ ಹೊನ್ನಘಟ್ಟ ಕೆರೆಯ ಅಂಗಳದ ಪೊದೆಯಲ್ಲಿ ಶವವನ್ನು ಎಸೆದಿದ್ದರು.

ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಕೊಂಡ ದೊಡ್ಡಬೆಳವಂಗಲ ಪೊಲೀಸರು ಶವದ ಪತ್ತೆಗಾಗಿ ತನಿಖೆ ಆರಂಭಿಸಿದಾಗ ನಗರದ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಅ.2ರಂದು ಯುವಕ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೊಳೆತ ಶವವನ್ನು ನಾಪತ್ತೆಯಾದ ಯುವಕನ‌ ಕುಟುಂಬದವರನ್ನು ವಿಚಾರಿಸಿದಾಗ ಅದು ಪಿ.ಚೇತನ್(20)ಎಂದು ಪತ್ತೆಯಾಗಿದೆ. ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

SCROLL FOR NEXT