ರಾಜ್ಯ

ರಾಮನಗರ: ಮಾಗಡಿ ಯುವತಿಯದ್ದು ಕೊಲೆಯಲ್ಲ, ಮರ್ಯಾದಾ ಹತ್ಯೆ; ತಂದೆ, ಸಹೋದರನ ಬಂಧನ

Manjula VN

ರಾಮನಗರ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಾಗಡಿಯ 19 ವರ್ಷದ ಯುವತಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

 ಅ.8ರಂದು ನಾಪತ್ತೆಯಾಗಿದ್ದ ಯುವತಿ, ಅ.10ರಂದು ಆಕೆಯ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಪ್ರಿಯಕರೇ ಈ ಹತ್ಯೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಪೊಲೀಸ್​ ದೂರು ದಾಖಲಿಸಿದ್ದರು. 

ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣವನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಮಾಡಲಾಗಿರುವ ಹತ್ಯೆ  ಎಂದು ಬಿಂಬಿಸಿದ್ದರು. ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿದ ಪೊಲೀಸರು ಗಂಭೀರ ತನಿಖೆ ನಡೆಸಿದ್ದರು. ಈ ವೇಳೆ ಯುವತಿಯನ್ನು ಆಕೆಯ ಪೋಷಕರೇ ಮರ್ಯಾದಾ ಹತ್ಯೆ ಮಾಡಿರುವ ಸತ್ಯ ಬಯಲಾಗಿದೆ. 

ಪರಿಶಿಷ್ಟ ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ಮಗಳನ್ನೇ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ಮತ್ತು ದೊಡ್ಡಪ್ಪನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟದಹಳ್ಳಿ ನಿವಾಸಿ ಕೃಷ್ಣಪ್ಪ (48) ಹಾಗೂ ಅವರ ಸಹೋದರನ ಮಗ ಚೇತನ್‌ (21) ಬಂಧಿತರು. 

ಕೊಲೆಗೆ ಸಹಕರಿಸಿದ ಮತ್ತೊಬ್ಬ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ತಿಂಗಳ 9ರಂದು ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಹೇಮಲತಾ (19) ಕಾಣೆಯಾಗಿದ್ದಾಳೆ ಎಂದು ಕೃಷ್ಣಪ್ಪ ಎಂಬವರು ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಮರುದಿನವೇ ಅವರ ಸಹೋದರನ ತೋಟದಲ್ಲಿ ಯುವತಿಯ ಶವ ಪತ್ತೆಯಾಗಿತ್ತು.

ವ್ಯವಸ್ಥಿತ ಕೃತ್ಯ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಹೇಮಲತಾ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದರು. ಈ ಸಂಬಂಧ ಠಾಣೆಯಲ್ಲಿ ಹಿಂದೆಯೂ ರಾಜೀ ಸಂಧಾನ ನಡೆದಿತ್ತು.

SCROLL FOR NEXT