ರಾಜ್ಯ

ಬೆಂಗಳೂರಿನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿತ ಪ್ರಕರಣ: ಮೃತರ ಸಂಖ್ಯೆ 2ಕ್ಕೆ ಏರಿಕೆ

Lingaraj Badiger

ಬೆಂಗಳೂರು: ನಗರದ ಬಿನ್ನಿಮಿಲ್ ಸಮೀಪದ ಬಾಳೆ ಮಂಡಿಯಲ್ಲಿ ಸಿಕ್ಕ ಸಿಕ್ಕವರಿಗೆ ವ್ಯಕ್ತಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಎರಡಕ್ಕೆ ಏರಿಕೆ ಆಗಿದೆ.

ಮೃತ ವ್ಯಕ್ತಿಯನ್ನು ಆಂಜನಪ್ಪ ಗಾರ್ಡನ್ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಕಾಟನ್‌ಪೇಟೆ ಮಂಡಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಗಣೇಶ್ ನಿನ್ನೆ ಬೆಳಿಗ್ಗೆ 8.30ರ ಸುಮಾರಿಗೆ ಕುರಿ ಮಾಂಸ ಖರೀದಿಸಲೆಂದು ಬಾಳೇಕಾಯಿ ಮಂಡಿ ಪ್ರದೇಶಕ್ಕೆ ಬಂದಿದ್ದರು. ಅಲ್ಲಿ ವ್ಯಕ್ತಿಯೊಬ್ಬ ಮಾಂಸದ ಅಂಗಡಿಯಲ್ಲಿದ್ದ ಚಾಕು ತೆಗೆದುಕೊಂಡು ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ಇರಿದಿದ್ದನು. 

ಅಂಗಡಿ ಸಿಬ್ಬಂದಿ ಆತನನ್ನು ಬೆನ್ನಟ್ಟಿದ್ದರು. ಆತ ಚಾಕು ಹಿಡಿದುಕೊಂಡೇ ಅಂಜನಪ್ಪ ಗಾರ್ಡನ್, ಚಲವಾದಿ ಪಾಳ್ಯ ಹಾಗೂ ಭಕ್ಷಿ ಗಾರ್ಡನ್‌ನಲ್ಲಿ ಓಡಾಡಿದ್ದು, ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ನಿನ್ನೆ ಮಾರಿ (35) ಎಂಬುವವರು ಮೃತಪಟ್ಟಿದ್ದು, ಇಂದು ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಗಾಯಗೊಂಡ ಇತರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT