ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ನಲುಗಿ ಹೋಗಿದ್ದು, ಹಲವು ರಸ್ತೆಗಳು ಜಲಾವೃತಗೊಂಡಿದ್ದವು.
ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್, ಗೋವಿಂದರಾಜನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡು ಅಕ್ಷರಶಃ ದ್ವೀಪದಂತಾಗಿದ್ದವು. ಮನೆಗಳಿಗೆ ನೀರು ನುಗ್ಗಿ, ಬೈಕು ಹಾಗೂ ಕಾರು ನೀರಿನಲ್ಲಿ ಮುಳುಗಡೆಯಾಗಿದ್ದವು. ಹಲವಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡಿದರು.
ಮಂಗಳವಾರ ದಿನವಿಡೀ ಮೋಡ ಕವಿದ ವಾತಾವರಣ ಕಂಡು ಬಂತು. ಸಂಜೆ ವೇಳೆಗೆ ಆರಂಭವಾದ ಧಾರಾಕಾರ ಮಳೆ ತಡರಾತ್ರಿವರೆಗೆ ಸುರಿಯಿತು. ನಗರದ ದಕ್ಷಿಣ, ಪಶ್ಚಿಮ ಮತ್ತು ಆರ್.ಆರ್.ನಗರ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಮಲ್ಲತ್ತಹಳ್ಳಿ, ರಾಜರಾಜೇಶ್ವರಿ ನಗರ, ವಿಶ್ವೇಶ್ವರ ಲೇಔಟ್, ಗೋವಿಂದರಾಜನಗರ, ಶಂಕರಪ್ಪ ಲೇಔಟ್, ಬಿಇಎಂಎಲ್ ಮೂರನೇ ಹಂತ ಸೇರಿದಂತೆ ವಿವಿಧ ಭಾಗದ 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.
ಭಾನುವಾರ ತಡರಾತ್ರಿ ಮಲೆಗೆ ಜಲಾವೃತಗೊಂಡಿದ್ದ ಮಲ್ಲತ್ತಹಳ್ಳಿಯ ಎನ್'ಜಿಎಫ್ ಬಡಾವಣೆಯ ಅನೇಕ ಮನೆಗಳಿಗೆ ಮತ್ತೆ ಮಂಗಳವಾರದ ಮಳೆಗೂ ನೀರು ನುಗ್ಗಿ ಅವಾಂತರ ಉಂಟಾಗಿದೆ. ರಾಜರಾಜೇಶ್ವರಿ ನಗರದ ಕಾಫಿಕಟ್ಟೆ ಹೋಟೆಲ್, ಕೆರೆಕೊಡಿಯ ಸೆಲ್ಲಾರಹಳ್ಳಿಯಲ್ಲಿನ ಅಪಾರ್ಟ್'ಮೆಂಟ್'ವೊಂದರ ಬೇಸ್'ಮೆಂಟ್'ಗೆ ನೀರು ನುಗ್ಗಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮಳೆ ನೀರು ವಾಹನ ನಿಲುಗಡೆಯ ಸೆಲ್ಲರ್'ಗಳಿಗೆ ನುಗ್ಗುವ ಜೊತೆ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ 20 ಬೈಕ್ ಹಾಗೂ 10ಕ್ಕೂ ಹೆಚ್ಚು ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇನ್ನು ಜೆಪಿ ನಗರ, ಆರ್'ಆರ್ ನಗರದಲ್ಲಿ ತಲಾ ಒಂದು ಮರ ಹಾಗೂ ಮರ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ.