ರಾಜ್ಯ

ಕೊರೋನಾ ವ್ಯಾಪಕವಾಗುತ್ತಿದ್ದು, ಶಾಲೆಗಳ ತೆರೆಯಲು ಇದು ಸಕಾಲವಲ್ಲ: ಸಿಎಂ ಯಡಿಯೂರಪ್ಪಗೆ ಶಿಶು ವೈದ್ಯರು

Manjula VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಜಡಿಯಾಟ್ರಿಕ್ಸ್ (ಐಎಪಿ) ಸರ್ಕಾರಕ್ಕೆ ತಿಳಿಸಿದೆ. 

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಐಎಪಿ, ಶಾಲೆ ಹಾಗೂ ಕಾಲೇಜುಗಳ ಪುನರಾರಂಭಕ್ಕ ಇದು ಸೂಕ್ತ ಸಮಯವಲ್ಲ. ಶಾಲಾ-ಕಾಲೇಜುಗಳನ್ನು ತೆರೆದಿದ್ದ ಅಮೆರಿಕಾ ಹಾಗೂ ಕೊರಿಯಾದಲ್ಲಿ ಈಗಾಗಲೇ ಕೊರೋನಾ ಸಮುದಾಯ ಹಂತ ತಲುಪಿದೆ ಎಂದು ತಿಳಿಸಿದೆ. 

"ಮಕ್ಕಳು ಮತ್ತು ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ, ವೈಜ್ಞಾನಿಕ ಮತ್ತು ಸಾಂಕ್ರಾಮಿಕ ದತ್ತಾಂಶಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆಂದು ಕರ್ನಾಟಕದ ಐಎಪಿ ಕಾರ್ಯದರ್ಶಿ ಡಾ.ನಾತೇಶ್ ಬಿ.ಎಚ್ ಅವರು ಹೇಳಿದ್ದಾರೆ. 

ಮಕ್ಕಳು ಶಾಲೆಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಒಂದು ಮಗು ವೈರಸ್‌ಗೆ ತುತ್ತಾದರೆ, ಆ ಮಗುವಿನ ಪೋಷಕರು ಮತ್ತು ಮನೆಯಲ್ಲಿರುವ ಹಿರಿಯರು ಸೇರಿದಂತೆ ಇಡೀ ಕುಟುಂಬದವರು ಸೋಂಕಿಗೊಳಗಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಆರೋಗ್ಯ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರಲಿದೆ. ಮಕ್ಕಳು ದುರ್ಬಲರಾಗಿದ್ದು, ಕೋವಿಡ್ -19 ಮರಣ ಪ್ರಮಾಣ ಹೆಚ್ಚಾಗಬಹುದು. ಅದೃಷ್ಟವಶಾತ್ ನಮ್ಮಲ್ಲಿ ಹೆಚ್ಚಿನ ಮಕ್ಕಳು ಸೋಂಕಿಗೊಳಗಾಗಿಲ್ಲ ಎಂದು ಬೆಂಗಳೂರು ವಿಭಾಗದ ಉಪಾಧ್ಯಕ್ಷ ಡಾ.ಶರತ್ ಚಂದ್ ಎಸ್ ಅವರು ತಿಳಿಸಿದ್ದಾರೆ. 

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ರದ್ದು ಮಾಡುವುದು ಅಥವಾ ಲಸಿಕೆ ಸಿಗುವವರೆಗೂ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವುದೇ ಉತ್ತಮವೆಂದು ತಿಳಿಸಿದ್ದಾರೆ. 

SCROLL FOR NEXT