ರಾಜ್ಯ

ಹಾಡಹಗಲೇ ಮಚ್ಚು ಹಿಡಿದು ಅಂಗಡಿ ಮುಂದೆ ವ್ಯಕ್ತಿ ದಾಂಧಲೆ: ಸಿಸಿಟಿವಿಯಲ್ಲಿ ಸೆರೆ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ಎಷ್ಟೇ ಜಾಗೃತರಾಗಿ ಕಾರ್ಯನಿರ್ವಹಿಸಿದರೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಓರ್ವ ವ್ಯಕ್ತಿ ಹಾಡಹಗಲೇ ಮಚ್ಚು ಹಿಡಿದು ಅಂಗಡಿಯೊಂದರ ಬಳಿ ದಾಂಧಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ನಡೆದಿರುವ ಘಟನೆ ನಡೆದಿದೆ. ಕಾಚರಕನಹಳ್ಳಿ ರಸ್ತೆಯಲ್ಲಿ ಮಳೆಗೆ ಅಂಗಡಿಗಳ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಸಾರ್ವಜನಿಕರನ್ನು ವ್ಯಕ್ತಿ ಮಚ್ಚು ತೋರಿಸಿ ಹೆದರಿಸಿ, ಬೆದರಿಕೆ ಹಾಕಿದ್ದಾನೆ. ನಂತರ ಮಾರಕಾಸ್ತ್ರ ಹಿಡಿದು ಅಂಗಡಿ ಮಾಲೀಕನನ್ನು ಹೆದರಿಸಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ.

ಮಳೆ ಬರುತ್ತಿದೆ ಎಂದು ರಸ್ತೆ ಪಕ್ಕದ ಅಂಗಡಿ ಬಳಿ ಒಂದಷ್ಟು ಜನರು ನಿಂತಿದ್ದರು. ಅದೇ ವೇಳೆಗೆ ಯುವಕನೊಬ್ಬ ಅಲ್ಲಿಗೆ ಬಂದಿದ್ದು, ಕೆಲವೇ ಕ್ಷಣಗಳಲ್ಲಿ ಉಡುಪಿನೊಳಗೆ ಮರೆಯಾಗಿಟ್ಟುಕೊಂಡಿದ್ದ ಮಚ್ಚನ್ನು ಏಕಾಏಕಿ ಹೊರಕ್ಕೆ ತೆಗೆದು ಬೀಸಿದ್ದಾನೆ. ಆಗ ಅಲ್ಲಿದ್ದ ಸಾರ್ವಜನಿಕರೆಲ್ಲ ಬೆಚ್ಚಿಬಿದ್ದಿದ್ದು, ತಕ್ಷಣ ಅಲ್ಲಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಳಿಕ ಆತ ಮಚ್ಚು ತೋರಿಸಿ ಅಂಗಡಿಯವನಿಗೆ ಎಚ್ಚರಿಕೆ ನೀಡುತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ. ವಿಡಿಯೋ ತುಣುಕು ಆಧರಿಸಿ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯಾವಳಿ ದಾಖಲಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

SCROLL FOR NEXT