ರಾಜ್ಯ

ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ರಿಂದ ಆಯುಧ ಪೂಜೆ 

Nagaraja AB

ಮೈಸೂರು: ಮೈಸೂರು ಅರಮನೆಯಲ್ಲಿ  ಆಯುಧ ಪೂಜೆಯನ್ನು  ಇಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಂಪ್ರದಾಯಿಕವಾಗಿ ನೆರವೇರಿಸಿದರು.

ಇಂದು ಬೆಳಿಗ್ಗೆ 6 ಗಂಟೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅರಮನೆಯ ಆನೆ  ಬಾಗಿಲಿಗೆ ಆಗಮಿಸಿದವು. ಮುಂಜಾನೆ ಜರುಗಿದ  ಚಂಡಿ ಹೋಮಕ್ಕೆ ಯದುವೀರ್ ಅವರು ಪೂರ್ಣಾಹುತಿ ಅರ್ಪಿಸಿದರು.  

ಇದಕ್ಕೂ ಮೊದಲು ಮುಂಜಾನೆ 5 ಗಂಟೆ 28 ನಿಮಿಷದಿಂದ 6 ಗಂಟೆ 48 ನಿಮಿಷದೊಳಗೆ ಸಲ್ಲುವ ಶುಭ ಮಹೂರ್ತದಲ್ಲಿ ಅರಮನೆಯ  ಆಯುಧಗಳನ್ನು ರಥ ವಾಹನದಲ್ಲಿ ಆನೆ, ಕುದುರೆ, ಒಂಟೆ ಮತ್ತು ಹಸುವಿನೊಡನೆ ಸೋಮೇಶ್ವರ ದೇವಾಲಯಕ್ಕೆ ತರಲಾಯಿತು.

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮತ್ತೆ ಅರಮನೆಯ ಆನೆ ಬಾಗಿಲಿಗೆ ತರಲಾಯಿತು.ತರುವಾಯ ಶುಭ ಮಹೂರ್ತದಲ್ಲಿ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಅವರು ರಾಜ ಮಹಾರಾಜರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿದರು. 

ತರುವಾಯ ಅರಮನೆಯ ಸವಾರಿ ತೊಟ್ಟಿಯಲ್ಲಿ ಯದುವೀರ್ ಅವರು ತಾವು ಬಳಸುವ ಕಾರುಗಳು ಸೇರಿದಂತೆ ಆನೆ, ಕುದುರೆ, ಒಂಟೆ, ಹಸುವಿಗೂ ಪೂಜೆ ಸಲ್ಲಿಸಿದರು. ಮಂಗಳವಾದ್ಯ ಹಾಗೂ ಪೊಲೀಸ್  ಬ್ಯಾಂಡ್ ಸಂಗೀತದ ಹಿಮ್ಮೇಳದಲ್ಲಿ ಯದುವೀರ್ ಅವರು ಆಯುಧ ಪೂಜೆ ನೆರವೇರಿಸಿದರು. 

ಜನರಿಗೆ ಎದುರಾಗಿರುವ ಕೊರೋನಾ ಸಂಕಷ್ಟದಿಂದ ಮುಕ್ತ ಮಾಡಿ ಸುಖ, ಸಮೃದ್ಧಿ ನೆಲೆಸಲಿ ಎಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

SCROLL FOR NEXT