ರಾಜ್ಯ

ಮಹಾ ಮಳೆ: 532 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆ, ಹಾನಿಗೊಳಗಾದ ಮನೆಗಳಿಗೆ ರೂ.25 ಸಾವಿರ ಚೆಕ್ ನೀಡಿದ ಪಾಲಿಕೆ

Manjula VN

ಬೆಂಗಳೂರು: ಕಳೆದ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ನಗರದಲ್ಲಿ ಹಾನಿಗೊಳಗಾದ 344 ಕುಟುಂಬಗಳಿಕೆ ರಾಜ್ಯ ಸರ್ಕಾರ ತಲಾ ರೂ.25 ಸಾವಿರ ಪರಿಹಾರ ನೀಡಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣೆ ಅಡಿ ತಲಾ ರೂ.3 ಸಾವಿರ ಮಾತ್ರ ಪರಿಹಾರ ನೀಡುವುದಕ್ಕೆ ಅವಕಾಶವಿದೆ. ಆದರೆ, ಹೆಚ್ಚು ಹಾನಿಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ದೇಶನದ ಮೇಲೆ ಹೊಸಕೆರೆಹಳ್ಳಿಯ 300 ಕುಟುಂಬಗಳು, ಕುಮಾರಸ್ವಾಮಿ ಲೇಔಟ್ ನಲ್ಲಿರುವ 30 ಹಾಗೂ ಬೊಮ್ಮನಹಳ್ಳಿಯಲ್ಲಿರುವ 198 ಕುಟುಂಬಗಳಿಗೆ ಚೆಕ್ ಮೂಲಕ ತಲಾ ರೂ.25,000 ಪರಿಹಾರವನ್ನು ನೀಡಲಾಗಿದೆ ಎಂದು ಬಿಬಿಎಂಪಿ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪರಿಹಾರ ವಿತರಣೆ ವೇಳೆ ಒಂದು ಅಥವಾ ಎರಡು ಮನೆಗಳನ್ನು ಬಿಟ್ಟುಬಿಟ್ಟಿದ್ದರೆ, ಅಂತಹ ಕುಟುಂಬಗಳು ನಮಗೆ ಮಾಹಿತಿ ನೀಡಬಹುದು. ನಂತರ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಪ್ರವಾಹದಿಂದ ಕೇವಲ 600 ಕುಟುಂಬಗಳಲ್ಲ 850 ಮನೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. 

ಇಂತಹ ದುರಂತದ ಸಮಯದಲ್ಲಿ ಜನರು ಉತ್ಪ್ರೇಕ್ಷೆ ಮಾಡುವ ಪ್ರವೃತ್ತಿಯೂ ಹೊಂದಿದ್ದಾರೆ. ಆಯಾ ಕ್ಷೇತ್ರಗಳ ಜನರು ಹಾನಿಗೊಳಗಾದ ಮನೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಹಾನಿ ಕುರಿತು ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಆದೇಶಿಸಿದ್ದಾರೆ. ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತ ಸೂಚಿಸಿದ್ದಾರೆ. ಈ ಪ್ರದೇಶಗಳನ್ನು ಶೀಘ್ರಗತಿಯಲ್ಲಿ ಗುರ್ತಿಸಿ ತೆರವು ಕಾರ್ಯಾಚಣೆ ನಡೆಸುವಂತೆ ಆದೇಶಿಸಿದ್ದಾರೆ. ಆದರೆ, ಇನ್ನೂ ಆ ಕಾರ್ಯಗಳಾಗಿಲ್ಲ ಎಂದಿದ್ದಾರೆ. 

ತೆರವುಗೊಳಿಸಬೇಕಾಗಿರುವ ಮನೆಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಈಗಾಗಲೇ ಗುರ್ತಿಸಲಾಗಿದೆ. ಆದರೆ, ಹೈಕೋರ್ಟ್ ಆದೇಶದಿಂದಾಗಿ ಕಾರ್ಯಗಳು ಮುಂದಕ್ಕೆ ಸಾಗಿಲ್ಲ. ಕೊರೋನಾ ಸಾಂಕ್ರಾಮಿಕ ಸಂದರ್ಭ ಹಿನ್ನೆಲೆಯಲ್ಲಿ ಈ ವೇಳೆ ಯಾವುದೇ ಅತಿಕ್ರಮಣಗಳನ್ನು ತೆರವುಗೊಳಿಸಬಾರದು ಎಂದು ನ್ಯಾಯಾಲಯದ ಆದೇಶಿಸಿದೆ. ಈ ಕಾರಣದಿಂದಾಗಿ ತೆರವು ಕಾರ್ಯಗಳು ಸೂಕ್ತರೀತಿಯಲ್ಲಿ ನಡೆಸಲು ಸಾಧ್ಯವಾಗದೆ, ಪರಿಸ್ಥಿತಿಗಳು ಸೃಷ್ಟಿಯಾಗಿವೆ. ಇದೀಗ ಮುಖ್ಯಮಂತ್ರಿಗಳು ತೆರವುಗೊಳಿಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಹಿಂದೆ ಕೂಡ ಮುಖ್ಯ ಕಾರ್ಯದರ್ಶಿಗಳು ಅತಿಕ್ರಮಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು. ನಂತರ ರಾಜಕೀಯ ಹಸ್ತಕ್ಷೇಪಗಳಿಂದಾಗಿ ಆದೇಶ ಹಿಂಪಡೆಯಲಾಗಿತ್ತು. ತೆರವು ಕಾರ್ಯ ಕುರಿತು ಸಾಕಷ್ಟು ಗೊಂದಲಗಳಿವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

SCROLL FOR NEXT