ರಾಜ್ಯ

ಡಿ.ಜೆ.ಹಳ್ಳಿ ಗಲಭೆ ಪೂರ್ವ ನಿಯೋಜಿತ: ಎಸ್‌ಡಿಪಿಐ, ಪಿಎಫ್ಐ ನಿಷೇಧಕ್ಕೆ ಶಿಫಾರಸು- ಮದನ್ ಗೋಪಾಲ್

Raghavendra Adiga

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ರಾಜಕೀಯ ಉದ್ದೇಶಕ್ಕಾಗಿ ನಡೆದಿಲ್ಲ. ಇದು ಪೂರ್ವ ನಿಯೋಜಿತವಾಗಿ ನಡೆದ ಘಟನೆ. ಇದಕ್ಕೆಲ್ಲಾ ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆ ಕಾರಣ. ಈ ಎರಡು ಸಂಘಟನೆಗಳ ನಿಷೇಧಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಸದಸ್ಯ, ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಹೇಳಿದ್ದಾರೆ.

ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮದನ್ ಗೋಪಾಲ್, ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಘಟನೆ ತಕ್ಷಣಕ್ಕೆ ನಡೆದ ಸಹಜ ಘಟನೆ ಅಲ್ಲ. ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿರುವ ಘಟನೆಯಾಗಿದ್ದು, ಇದು ಕೇವಲ‌ ಕೋಮುಗಲಭೆ ಮಾತ್ರವಲ್ಲ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ. ಸ್ಥಳೀಯರು ಮತ್ತು ಒಳಗಡೆ ಇರುವ ಜನರಿಂದಲೇ ಈ ಘಟನೆ ನಡೆದಿದೆ ಎಂದು ಮದನ್ ಗೋಪಾಲ್ ಆರೋಪಿಸಿದರು.

ಆಗಸ್ಟ್ 11 ರ ರಾತ್ರಿ ನಡೆದ ಗಲಭೆಯ ಸಮಯದಲ್ಲಿ ಜನಸಮೂಹವು ಈ ಪ್ರದೇಶದ ಕೆಲವು ಪ್ರಮುಖ ಹಿಂದೂಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿತ್ತು ಮತ್ತು ಇಡೀ ಘಟನೆಯು "ರಾಜ್ಯ ಸರ್ಕಾರದ ವಿರುದ್ಧದ ಸಾಮಾನ್ಯ ಜನರ ನಂಬಿಕೆಯನ್ನು ಕಡಿಮೆ ಮಾಡುವ" ಉದ್ದೇಶದಿಂದ  "ರಾಜ್ಯದ ವಿರುದ್ಧದ ಗಲಭೆ" ಯಾಗಿತ್ತುಎಂದು ವರದಿಯಲ್ಲಿ ಹೇಳಲಾಗಿದೆ.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ ಬಬಲಾಡಿ ನೇತೃತ್ವದ ಸತ್ಯ ಶೋಧನಾ ಸಮಿತಿಯು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ನಿವೃತ್ತ ಐಎಫ್ಎಸ್ ಅಧಿಕಾರಿ ಆರ್ ರಾಜು ಸೇರಿದಂತೆ  ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ವಕೀಲರು, ಪ್ರಾಧ್ಯಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡಿತ್ತು. ಮದನ್ ಗೋಪಾಲ್ ನೇತೃತ್ವದ ಸಮಿತಿ ಸದಸ್ಯರು ಇಂದು ವರದಿಯನ್ನು ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ಹಿಂಸಾಚಾರದಲ್ಲಿ ಸುಮಾರು 36 ಸರ್ಕಾರಿ ವಾಹನಗಳು, ಸುಮಾರು 300 ಖಾಸಗಿ ವಾಹನಗಳು ಮತ್ತು ಅನೇಕ ಮನೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ ಒಟ್ಟಾರೆ ಹಾನಿಯು ಸುಮಾರು 10 ರಿಂದ 15 ಕೋಟಿ ರೂ ಎನ್ನಲಾಗಿದೆ.

SCROLL FOR NEXT