ರಾಜ್ಯ

ಎಸ್ಎಸ್ಎಲ್'ಸಿ ಮರು ಮೌಲ್ಯಮಾಪನದಲ್ಲಿ 625 ಅಂಕ: ರಾಜ್ಯದ 7ನೇ ಟಾಪರ್ ಎನಿಸಿಕೊಂಡ ಅಮೋಘ್

Manjula VN

ಬೆಂಗಳೂರು: ಎಸ್ಎಸ್ಎಲ್'ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಸಿಲಿಕಾನ್ ಸಿಟಿಯ ವಿದ್ಯಾ ವರ್ಧನ ಸಂಘ ಸರ್ದಾರ್ ಪಟೇಲ್ ಶಾಲೆಯ ವಿದ್ಯಾರ್ಥಿ ಅಮೋಘ್ 625ಕ್ಕೆ 625 ಅಂಕಘಳನ್ನು ಪಡೆದು ರಾಜ್ಯದ 7ನೇ ಟಾಪರ್ ಎನಿಸಿಕೊಂಡಿದ್ದಾರೆ. 

ಇತ್ತೀಚೆಗೆ ಬಂದ ಎಸ್ಎಸ್ಎಲ್'ಸಿ ಫಲಿತಾಂಶದಲ್ಲಿ ಅಮೋಘ್ 624 ಅಂಕ ಗಳಿಸಿದ್ದರು. 125ಕ್ಕೆ ಒಂದು ಅಂಕ ಕಡಿಮೆ ಬಂದ ಕನ್ನಡ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಬಂದಿದ್ದು, ಈ ಮೂಲಕ 625ಕ್ಕೆ 625 ಅಂಕಗಳಿಸಿ ರಾಜ್ಯದ 7ನೇ ಟಾಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

ಎಲ್ಲಾ ವಿಷಯಗಳಲ್ಲೂ ಅತ್ಯುತ್ತಮವಾಗಿ ಅಂಕ ಗಳಿಸಿದ್ದೆ, ಹೀಗಾಗಿ ಶಾಲೆಯ ಶಿಕ್ಷಕರು ನನಗೆ ದೂರವಾಣಿ ಕರೆ ಮಾಡಿ ಕನ್ನಡದಲ್ಲಿ ಒಂದು ಅಂಕ ಕಳೆದುಕೊಂಡಿರುವುದಾಗಿ ಹೇಳಿ ಮರುಮೌಲ್ಯಮಾಪನಕ್ಕೆ ಹಾಕುವಂತೆ ತಿಳಿಸಿದ್ದರು. ಎಲ್ಲಿ ಯಾವ ತಪ್ಪು ಮಾಡಿದ್ದೇನೆಂಬುದು ನನಗೆ ಗೊತ್ತಿಲ್ಲ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ. ಆದರೆ, ನನಲ್ಲಿ ವಿಶ್ವಾಸ ಹೆಚ್ಚಿಸಿ ಮರುಮೌಲ್ಯಮಾಪನಕ್ಕೆ ಹಾಕುವಂತೆ ತಿಳಿಸಿದ್ದರು. ಇದರಂತೆ ವಿದ್ಯಾರ್ಥಿ ಬರೆದಿದ್ದ ಉತ್ತರಪತ್ರಿಕೆಯ ನಕಲು ಕಾಪಿಯನ್ನು ಇಲಾಖೆ ಕಳುಹಿಸಿ ಕೊಟ್ಟಿದ್ದು, ಇದರಲ್ಲಿ ನಾಲ್ಕು ಅಂಕಗಳ ಪ್ರಶ್ನೆಯ ಉತ್ತರಕ್ಕೆ 3 ಅಂಕ ನೀಡಿರುವುದು ತಿಳಿದುಬಂದಿತ್ತು. ಉತ್ತರ ಸರಿಯಿದ್ದ ಕಾರಣ ನಾನು ಆಗಸ್ಟ್ 20ರಂದು ಮರುಮೌಲ್ಯ ಮಾಪನಕ್ಕೆ ಹಾಕಿದ್ದೆ. ಸೆಪ್ಟೆಂಬರ್ 5 ರಂದು ಅದರ ಫಲಿತಾಂಶ ಬಂದಿದ್ದು, ಇದೀಗ ಸಂಪೂರ್ಣ ಅಂಕ ಬಂದಿದೆ. ಇದೀಗ 625ಕ್ಕೆ 625 ಅಂಕ ಪಡೆದಿದ್ದೇನೆ. ನನ್ನ ಆತ್ಮವಿಶ್ವಾಸ ಹೆಚ್ಚಿಸಿದ ಶಿಕ್ಷಕರಿಗೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆಂದು ಅಮೋಘ್ ಹೇಳಿದ್ದಾರೆ. 

ಇದೀಗ ಆರ್'ವಿ ಪಿಯುಸಿ ಕಾಲೇಜಿನಲ್ಲಿ ನನಗೆ ಸೀಟ್ ದೊರೆತಿದ್ದು, ಭವಿಷ್ಯದಲ್ಲಿ ಪ್ರೊಫೆಸರ್ ಆಗಬೇಕೆಂದುಕೊಂಡಿರುವೆ. ಶಿಕ್ಷಕರ ಕ್ಷೇತ್ರಕ್ಕೆ ಬರಲು ಇಚ್ಛಿಸುತ್ತೇನೆ. ನನ್ನ ತಾಯಿ ಕೂಡ ಪ್ರೊಫೆಸರ್ ಆಗಿದ್ದು, ಅವರೇ ನನಗೆ ಪ್ರೇರಣೆ, ಸಂಸ್ಕೃತ ಹಾಗೂ ವಿಜ್ಞಾನ ನನ್ನ ಆಸಕ್ತಿದಾಯಕ ವಿಷಯಗಳಾಗಿವೆ ಎಂದು ತಿಳಿಸಿದ್ದಾರೆ. 

SCROLL FOR NEXT