ರಾಜ್ಯ

ಹುಲಿ ಉಗುರು ಮಾರಾಟ ಯತ್ನ: ಇಬ್ಬರು ಆರೋಪಿಗಳ ಬಂಧನ

Manjula VN

ಕೊಳ್ಳೇಗಾಲ: ಅಕ್ರಮವಾಗಿ ಹುಲಿ ಉಗುರು ದಾಸ್ತಾನು ಮಾಡಿಕೊಂಡಿದ್ದೂ ಅಲ್ಲದೆ ಅದನ್ನು ಮಾರಾಟಕ್ಕೆ ಯತ್ನಿಸಿದ್ದ ಆರೋಪಿಗಳಿಬ್ಬರನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಕೊಳ್ಳೆಗಾಲ ಪಟ್ಟಣದ ದೊಡ್ಡ ನಾಯಕರ ಬೀದಿಯ ನಾರಾಯಣಿ (33), ಅಂಚೆ ಕಚೇರಿಯ ಬಡಾವಣೆಯ ವಾಸಿ ನಯೀಂಪಾಶಾ (34) ಬಂಧಿತರು. 

ಬಂಧಿತ ಆರೋಪಿಗಳು ಹೊಸ ಅಣಗಳ್ಳಿ ಬಳಿ ಆಟೋದಲ್ಲಿ ಹುಲಿ ಉಗುರು ಮಾರಾಟಕ್ಕೆ ತೆಗೆದುಕೊಂಡು ತೆರಳುತ್ತಿದ್ದ ವೇಳೆ ಪೊಲೀಸರು ಜೀಪ್ ಕಂಡು ಪರಾರಿಯಾಗಲೆತ್ನಿಸಿದ್ದಾರೆ. 

ಗಸ್ತಿನಲ್ಲಿದ್ದು ಬೇರೊಂದು ಪ್ರಕರಣ ಮಾಹಿತಿಗಾಗಿ ಜೀಪ್ ನಲ್ಲಿ ತೆರಳಿದ್ದ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್ಐ ಮುದ್ದ ಮಾದೇವ, ಮುಖ್ಯ ಪೇದೆಗಳಾದ ಗುರು ಸ್ವಾಮಿ, ಎಪಿ ಶಂಕರ್, ಲೋಕೇಶ್, ಶಂಕರ, ಮಹದೇವಸ್ವಾಮಿ, ಕುಮಾರಸ್ವಾಮಿ, ಮಹಮ್ಮದ್ ಗಫಾರ್ ಅವರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಸುತ್ತುವರಿದು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ 2 ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ ವಿಚಾರ ಬೆಳಕಿಗೆ ಬಂದಿದೆ. 

ಬಂಧಿತ ನಾರಾಯಣಿ ಎಂಬಾತ 3 ತಿಂಗಳ ಹಿಂದೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿಯಿಂದ ಡಾಲರ್ ಮಾಡಿಸಿಕೊಳ್ಳುವುದಾಗಿ 2 ಹುಲಿ ಉಗುರುಗಳನ್ನು ರೂ.20 ಸಾವಿರ ಹಣ ನೀಡಿ ಖರೀದಿಸಿ, ಈಗ ನನಗೆ ಹಣದ ತೊಂದರೆಯಾದ ಕಾರಣಕ್ಕೆ ಮಾರಾಟ ಮಾಡಲು ಹೊಸ ಅಣಗಳ್ಳಿಗಡೆ ಹೊರಟಿದ್ದೆ ಎಂದು ಪೊಲೀಸರಿಗೆ ಸತ್ಯಾಂಶ ಬಾಯ್ಬಿಟ್ಟಿದ್ದಾರೆ. 

ಬಂಧಿತರಿಂದ 1 ಆಟೋ, 2 ಹುಲಿ ಉಗುರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹುಲಿ ಉಗುರು ಇವರಿಗೆ ಮಾರಾಟ ಮಾಡಿದವರಾರು ಎಂಬುದು ಸಹ ವಿಚಾರಣೆ ವೇಳೆ ಬೆಳಕಿಗೆ ಬರಬೇಕಿದೆ.

SCROLL FOR NEXT