ರಾಜ್ಯ

ಬಸವ ಕಲ್ಯಾಣ ಶಾಸಕ ಬಿ ನಾರಾಯಣರಾವ್ ನಿಧನ

Srinivasamurthy VN

ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. 

ಕೋವಿಡ್-19 ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಾರಾಯಣರಾವ್ ಅವರಿಗೆ ಆಗಸ್ಟ್ 31ರಂದು ಸೋಂಕು ದೃಢಪಟ್ಟಿತ್ತು. ಆಪ್ತರ ಸಲಹೆಯ ಮೇರೆಗೆ ಸೆಪ್ಟೆಂಬರ್ 1ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಚೇತರಿಸಿಕೊಂಡಿದ್ದರು. ನಂತರ ರಾಜಕೀಯ ಮುಖಂಡರು ಹಾಗೂ ಗೆಳೆಯರಿಗೆ ಮೊಬೈಲ್‌ ಕರೆ ಮಾಡಿ ‘ನಾನು ಕ್ಷೇಮವಾಗಿದ್ದೇನೆ. ನನ್ನ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ ನಿಮಗೆಲ್ಲರಿಗೂ ವಂದನೆಗಳು’ ಎಂದು ಹೇಳಿದ್ದರು.  ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿತ್ತು.

ನಂತರದಲ್ಲಿ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ತೊಂದರೆ ಅನುಭವಿಸಿದ್ದರು. ಕಾಮಾಲೆ, ಅಧಿಕ ರಕ್ತದೊತ್ತಡದಿಂದ ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. 

ನಾರಾಯಣರಾವ್ ಅವರು, ಮೈತ್ರಿ ಸರ್ಕಾರದ ವೇಳೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು.

SCROLL FOR NEXT