ರಾಜ್ಯ

ಬೀದರ್‌: ಪೊಲೀಸರಿಂದ ತಪ್ಪಿಸಿಕೊಂಡು ಬಾವಿಗೆ ಬಿದ್ದಿದ್ದ ಯುವಕ ಸಾವು, ಆತುರಕ್ಕೆ ಬಿದ್ದು ಜೀವವನ್ನೇ ಕಳಕೊಂಡ!

Vishwanath S

ಬೀದರ್‌: ಪೊಲೀಸರ ವಶದಲ್ಲಿದ್ದ ಆರೋಪಿ ಯುವಕನೋರ್ವ ರಾತ್ರಿ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಮಲನಗರ ತಾಲ್ಲೂಕಿನ ಮುರ್ಗ(ಕೆ ) ಗ್ರಾಮದಲ್ಲಿ ನಡೆದಿದೆ.

25 ವರ್ಷದ ಶ್ರೀಮಂತ ಮಹಾದೇವ ಗಾಯಕವಾಡ್ ಮೃತ ಯುವಕ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಚಿಕ್ಕಪ್ಪ ಸಂಜೀವ ಕುಮಾರ್ ಗಾಯಕವಾಡ್ ಅವರೊಂದಿಗೆ ಜಗಳಮಾಡಿ ಅವರ ಮೇಲೆ ಬ್ಲೇಡ್‌ ನಿಂದ ದಾಳಿ ನಡೆಸಿ ಗಾಯಗೊಳಿಸಿದ್ದನು. ಇದರಿಂದ ಆಕ್ರೋಶಗೊಂಡ ಸಂಜೀವ ಕುಮಾರ್ ಅವರು ಶ್ರೀಮಂತ್ ವಿರುದ್ಧ ಕಮಲನಗರ ಠಾಣೆಯಲ್ಲಿ ದೂರು ದಾಖಲಿಸದ್ದರು.

ನಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶ್ರೀಮಂತ್ ನನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದರು. ನಂತರ ರಾತ್ರಿ ಠಾಣೆಯಲ್ಲಿಯೂ ಆತ ಪೊಲೀಸರ ಜೊತೆಗೂ ವಾದ ಮಾಡಿದ್ದಾನೆ. ಅಲ್ಲದೇ, ತನ್ನನ್ನು ಬಿಟ್ಟು ಕಳುಹಿಸದಿದ್ದರೇ ವಿದ್ಯುತ್ ಶಾಕ್ ಹಚ್ಚಿಕೊಂಡು ಠಾಣೆಯಲ್ಲಿ ಸಾಯುವುದಾಗಿ ಬೆದರಿಕೆ ಕೂಡ ಹಾಕಿದ್ದನು ಎನ್ನಲಾಗಿದೆ.

ಇನ್ನು ರಾತ್ರಿ 11 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಹೊರಗೆ ಹೋದಾಗ ಓಡಿ ಹೋಗಿ ಠಾಣೆಯ ಸಮೀಪವಿದ್ದ ಬಾವಿಗೆ ಬಿದ್ದಿದ್ದಾನೆ. ಕತ್ತಲಾಗಿದ್ದರಿಂದ ಆತನನ್ನು ರಕ್ಷಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಬೆಳಗ್ಗೆಯಷ್ಟರಲ್ಲಿ ಯುವಕನ ಮೃತದೇಹ ಮೇಲಕ್ಕೆ ಬಂದಿತ್ತು. ಒಟ್ಟಿನಲ್ಲಿ ಆತುರದ ನಿರ್ಧಾರದ ಯುವಕ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. 

SCROLL FOR NEXT