ರಾಜ್ಯ

ವಲಯ ಮಟ್ಟದಲ್ಲಿ ಹೆಚ್ಚೆಚ್ಚು ಕೋವಿಡ್ ಕೇರ್ ಕೇಂದ್ರ: ಬಿಬಿಎಂಪಿ ಮುಖ್ಯ ಆಯುಕ್ತ

Manjula VN

ಬೆಂಗಳೂರು: ರಾಜ್ಯದಲ್ಲಿ ದಿನಕಳೆದಂತೆ ಕೊರೋನಾ ಆರ್ಭಟ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಿಸಲು ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಂತೆ ವಲಯ ಮಟ್ಟದಲ್ಲಿ ಹೆಚ್ಚೆಚ್ಚು ಕೋವಿಡ್ ಕೇರ್ ಕೇಂದ್ರ ಸ್ಥಾಪಿಸಲು ಮುಂದಾಗಿದೆ. 

ಆರೋಗ್ಯ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳೊಂದಿಗೆ ನಿನ್ನೆಯಷ್ಟೇ ಬಿಬಿಎಂಪಿ ನೂತನ ಆಯುಕ್ತ ಗೌರವ್ ಗುಪ್ತಾ ಅವರು ಸಬೆ ನಡೆಸಿ ಮಾತುಕತೆ ನಡೆಸಿದರು. 

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತೀ ವಲಯದಲ್ಲೂ  50-100 ಹಾಸಿಗೆಯ ವ್ಯವಸ್ಥೆ ಇರುವ ಕೋವಿಡ್ ಕೇರ್ ಕೇಂದ್ರ ಸ್ಥಾಪಿಸಲು ಸ್ಥಳ ಗುರ್ತಿಸುವಂತೆ ಸೂಚಿಸಲಾಗಿದೆ. ಹಜ್ ಭವನ ಹಾಗೂ ಹೆಚ್ಎಎಲ್ ಕಮಾಂಡ್ ಮತ್ತು ಕಂಟ್ರೋಲ್ ರೂಮ್ ನಲ್ಲಿ ರಚಿಸಲಾಗಿರುವ ದೊಡ್ಡ ಮಟ್ಟದ ಕೋವಿಡ್ ಕೇರ್ ಕೇಂದ್ರಗಳಂತೆ ಈ ಕೇಂದ್ರ ಗಳು ಇರುವುದಿಲ್ಲ. ಪ್ರಸ್ತುತ ಸ್ಥಾಪಿಸಲಾಗಿರುವ ಎರಡು ಕೋವಿಡ್ ಕೇರ್ ಕೇಂದ್ರಗಳಲ್ಲಿ ಶೇ.60 ರಷ್ಟು ಹಾಸಿಗೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ ಎಂದು ಹೇಳಿದ್ದಾರೆ. 

ಕೋವಿಡ್ ಸಂಬಂಧಿತ ವಿಚಾರ ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗೆ ಸಂಪರ್ಕಿಸಲು ಸಾಕಷ್ಟು ದೂರವಾಣಿ ಸಂಖ್ಯೆಗಳಿರುವುದರಿಂದ ಜನರು ಗೊಂದಲಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಈ ಗೊಂದಲ ದೂರಾಗಿಸಲು ಇದೀಗ 1912 ಸಿಂಗಲ್ ನಂಬರ್ ನೀಡಲಾಗಿದೆ. ಕೊರೋನಾ ಸಂಬಂಧಿತ ಸೇವೆಗಳು ಹಾಗೂ ಸಮಸ್ಯೆಗಳಿಗೆ ಸಾರ್ವಜನಿಕರು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 

ನಗರದಲ್ಲಿ ನಿತ್ಯ 36,000 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಈ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತದೆ. ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡಲು ಅಪಾರ್ಟ್ ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಒಂದು ಮನೆಯಲ್ಲಿ 5 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದೇ ಆದರೆ, ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗುತ್ತದೆ ಎಂದಿದ್ದಾರೆ. 

ಕೇಂದ್ರೀಕೃತ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆಯನ್ನು ಪುನಃ ಸಕ್ರಿಯಗೊಳಿಸಲಾಗುತ್ತಿದ್ದು, ಇದು ಹಾಸಿಗೆಯ ಲಭ್ಯತೆಯ ಕುರಿತು ಜನರಿಗೆ ಅರಿವು ಮೂಡಿಸುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಬೆಂಗಳೂರು ಕರಗ ಕುರಿತು ಮಾತನಾಡಿದ ಅವರು, ಈ ವರೆಗೂ ಯಾವುದೇ ನಿರ್ಧಾರಗಳನ್ನೂ ಕೈಗೊಳ್ಳಲಾಗಿಲ್ಲ. ಧರ್ಮರಾಯಸ್ವಾಮಿ ದೇವಾಲಯ ಇರುವ ವಾರ್ಡ್‌ನಲ್ಲಿ 95 ಜನರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. 

SCROLL FOR NEXT