ರಾಜ್ಯ

ಯುಗಾದಿಗೆ ಭಾರೀ ಸಂಖ್ಯೆಯಲ್ಲಿ ಪ್ರಯಾಣ: ಕೊರೋನಾ ಹೆಚ್ಚಳ ಆಂತಕ ವ್ಯಕ್ತಪಡಿಸಿದ ತಜ್ಞರು

Manjula VN

ಬೆಂಗಳೂರು: ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಕೊರೋನಾ ಸೋಂಕು ಹೆಚ್ಚಾಗುವ ಕುರಿತು ತಜ್ಞರು ಆಂತಕ ವ್ಯಕ್ತಪಡಿಸಿದ್ದಾರೆ. 

ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಆರ್ ಬಾಬು ಅವರು ಪ್ರತಿಕ್ರಿಯೆ ನೀಡಿ, ಅಂತರ್ ರಾಜ್ಯ ಪ್ರಯಾಣ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಲಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಿಗೆ ಹೋಲಿಕೆ ಮಾಡಿದರೆ, ಬೆಂಗಳೂರಿನಲ್ಲಿ ಅತೀ ಹೆಚ್ಚು ಸೋಂಕು ಇರುವುದು ಕಂಡು ಬಂದಿದೆ. ಕೆಲ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ವಾರಾಂತ್ಯದ ವೇಳೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಮಂಜುನಾಥ್ ಸಿಎನ್ ಅವರು ಮಾತನಾಡಿ, ಕೊರೋನಾ 2ನೇ ಅಲೆ ಆರಂಭವಾಗುತ್ತಿದ್ದು, ಮುಂದಿನ 10 ದಿನಗಳು ನಿರ್ಣಾಯಕ ದಿನಗಳಾಗಿವೆ. ಹೀಗಾಗಿ ಜನರು ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿದೆ. ಮೊದಲನೇ ಅಲೆಗಿಂತಲೂ ಈ ಬಾರಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿರಲಿದೆ. ಜನರು ಸಾಧ್ಯವಾದಷ್ಟು ಪ್ರಯಾಣವನ್ನು ನಿಯಂತ್ರಿಸಬೇಕು. ಇಲ್ಲದೇ ಹೋದರೆ, ಹಾಸಿಗೆಗಳು ಲಭ್ಯವಿಲ್ಲದೆ ಆರೋಗ್ಯ ವ್ಯವಸ್ಥೆ ಕುಸಿದು ಬೀಳಲಿದೆ ಎಂದು ತಿಳಿಸಿದ್ದಾರೆ. 

ಸರ್ಕಾರ ಕೂಡಲೇ ವಾರಾಂತ್ಯ ಲಾಕ್ಡೌನ್ ಘೋಷಣೆ ಮಾಡಬೇಕು. ಸಾರ್ವಜನಿಕ ಸಮಾರಂಭಗಳಿಗೆ ಸರ್ಕಾರ ನಿಷೇಧ ಹೇರಿದ್ದರೂ ಕೂಡ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಪ್ರತೀನಿತ್ಯ ಇರುವುದು ಕಂಡು ಬರುತ್ತಿದೆ. ಹಬ್ಬ ಹಿನ್ನೆಲೆಯಲ್ಲಿ ಹೊಸ ಬಟ್ಟೆ, ಹೂವು, ಹಣ್ಣು ಹಾಗೂ ದಿನಸಿ ಸಾಮಾಗ್ರಿಗಳನ್ನು ಖರೀದಿ ಮಾಡಲು ಹೆಚ್ಚೆಚ್ಚು ಜನರು ಹೊರಗೆ ಬರುತ್ತಿದ್ದಾರೆ. ಮಾಲ್, ಮಾರುಕಟ್ಟೆಗಳಲ್ಲಿ ಹೆಚ್ಚೆಚ್ಚು ಜನರು ಕಂಡು ಬರುತ್ತಿದ್ದಾರೆ. ಈ ಬೆಳವಣಿಗೆಗಳು ಸೋಂಕು ಹೆಚ್ಚಾಗುವಂತೆ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ. 

ಕೆಎಸ್ಆರ್'ಟಿಸಿ ಬಸ್ ಲಭ್ಯವಿಲ್ಲದಿರುವುದರಿಂದ ಸಾಕಷ್ಟು ಜನರು ಬೆಂಗಳೂರಿನಿಂದ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಕೊರೋನಾ ಹೆಚ್ಚಿರುವ ರಾಜ್ಯಗಳಿಂದಬರುವ ಜನರು ರೈಲುಗಳ ಮೂಲಕ ರಾಜ್ಯಕ್ಕೆ ಬಂದಿದ್ದೇ ಆದರೆ, ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. 

SCROLL FOR NEXT