ರಾಜ್ಯ

ಅಪಘಾತದಲ್ಲಿ ಇಬ್ಬರ ಸಾವು: ಕಾರು ಓಡಿಸುತ್ತಿದ್ದದ್ದು ನಾನೇ - ವಿಜಯ್ ಕುಲಕರ್ಣಿ

Vishwanath S

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ವಿಜಯ್ ಕುಲಕರ್ಣಿ ಚಲಿಸುತ್ತಿದ್ದ ಕಾರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವೇಳೆ ಕಾರು ಓಡಿಸುತ್ತಿದ್ದದ್ದು ನಾನೇ ಎಂದು ವಿಜಯ್ ಕುಲಕರ್ಣಿ ಹೇಳಿದ್ದಾರೆ. 

ಬೆಳಗಾವಿಯಿಂದ ನಗರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಕೆಎ–25–ಪಿ–007 ಕಾರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಘಟನಾ ಸ್ಥಳದಿಂದ ವಿಜಯ್ ಕುಲಕರ್ಣಿ ನಿರ್ಗಮಿಸಿದ್ದರು. ಆದರೆ ತಡರಾತ್ರಿ ಸಂಚಾರ ಠಾಣೆಗೆ ಭೇಟಿ ನೀಡಿದ ವಿಜಯ್ ಕುಲಕರ್ಣಿ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಅಪಘಾತವಾದಾಗ ಕಾರು ಓಡಿಸುತ್ತಿದ್ದದ್ದು ನಾನೇ ಎಂದು ವಿಜಯ್ ಕುಲಕರ್ಣಿ ಹೇಳಿದ್ದಾರೆ. 

ಮೃತರನ್ನು ದೇವರಹುಬ್ಬಳ್ಳಿ ಮೂಲದ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಎಂದು ಗುರುತಿಸಲಾಗಿದೆ. ಬೆಳಗಾವಿಯಿಂದ ಬರುತ್ತಿದ್ದ ಕಾರು ಕುಮಾರೇಶ್ವರ ನಗರದ ಕೆವಿಜಿ ಬ್ಯಾಂಕ್‌ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ಹೊಡೆತಕ್ಕೆ ಇಬ್ಬರೂ ಮೃತಪಟ್ಟಿದ್ದು, ಇನ್ನಿಬ್ಬರೂ ತೀವ್ರವಾಗಿ ಗಾಯಗೊಂಡಿದ್ದರು.

ಬೆಳಗಾವಿಯಿಂದ ನಗರಕ್ಕೆ ಬರುತ್ತಿದ್ದ ಈ ಕಾರು (ಕೆಎ–25–ಪಿ–007) ವಿಜಯ ಕುಲಕರ್ಣಿ ಅವರಿಗೆ ಸೇರಿದ್ದು ಎನ್ನಲಾಗಿದೆ. ಈ ಸಂದರ್ಭದಲ್ಲಿ ಚಾಲಕ ಕಾರು ಚಲಾಯಿಸುತ್ತಿದ್ದರು. ವಿಜಯ ಕುಲಕರ್ಣಿ ಪಕ್ಕದ ಆಸನದಲ್ಲಿದ್ದರು ಎನ್ನಲಾಗಿದೆ.

ವಿಜಯ್ ಕುಲಕರ್ಣಿ ಕುಡಿದು ವಾಹನ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದರಿಂದ ಖುದ್ದು ನಾನೇ ಪೊಲೀಸ್ ಠಾಣೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದೆ ಎಂದರು. ಇನ್ನು ಎದುರಿಗೆ ಬರುತ್ತಿದ್ದ ಬೈಕ್ ಅನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದೆ ಎಂದರು. 

SCROLL FOR NEXT