ರಾಜ್ಯ

ಬನ್ನೇರುಘಟ್ಟದಲ್ಲಿ 2 ಹುಲಿ, 2 ಸಿಂಹದ ಮರಿಗಳ ಜನನ

Manjula VN

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ನಡುವಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಧಿಕಾರಿಗಳ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 

ಉದ್ಯಾನವನದ ಸನಾ (ಸಿಂಹಿಣಿ) ಹಾಗೂ ಅನುಷ್ಕಾ (ಹುಲಿ) ತಲಾ ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪಾರ್ಕಿನ ಆವರಣದಲ್ಲಿ ಮರಿಗಳ ಕೇಕೆ ಕೂಗು ಅನುರಣಿಸುತ್ತಿವೆ. ಮರಿಗಳು ಆರೋಗ್ಯಕರವಾಗಿದ್ದು, ಲವಲವಿಕೆಯಿಂದಿವೆ. ಅವುಗಳ ಚಿನ್ನಾಟ ಕಾಣಲು ಪಾರ್ಗಿಗೆ ಬರುವ ಪ್ರವಾಸಿಗರಿಗೆ ಆನಂದದಾಯಕವಾಗಿರುತ್ತದೆ ಎಂದು ಆಡಳಿತಾಧಿಕಾರಿ ವನಶ್ರೀ ವಿಪಿನ್ ಸಿಂಗ್ ಅವರು ಹೇಳಿದ್ದಾರೆ. 

ಮರಿಗಳ ಜನನದಿಂದಾಗಿ ಪಾರ್ಕಿನಲ್ಲಿ ಸಿಂಹಗಳ ಸಂಖ್ಯೆ 21 ಹಾಗೂ ಹುಲಿಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಪ್ರಾಣಿಗಳ ದತ್ತು ಯೋಜನೆ ಚಾಲ್ತಿಯಲ್ಲಿದ್ದು, ಕಳೆದ ವರ್ಷದಲ್ಲಿ 230 ದಾನಿಗಳು ಒಟ್ಟು 299 ಪ್ರಾಣಿ, ಪಕ್ಷಿ ಹಾಗೂ ಸರೀಸೃಪಗಳನ್ನು ದತ್ತು ಪಡೆದು ಅವುಗಳ ಆಹಾರ, ಆರೈಕೆ, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ಉದಾರವಾಗಿ ಹಣ ನೀಡಿದ್ದಾರೆ. 

ಪ್ರಸಕ್ತ ಸಾಲಿಗೂ ದತ್ತು ಯೋಜನೆಯನ್ನು ಮುಂದುವರೆಸಿದ್ದು, ಮುದ್ದಾದ ಸಿಂಹ ಹಾಗೂ ಹುಲಿ ಮರಿಗಳ ಜೊತೆಗೆ ಅನೇಕ ಪ್ರಾಣಿಗಳನ್ನು ದತ್ತು ಪಡೆಯಬಹುದಾಗಿದೆ. ದತ್ತು ಮೊತ್ತದ ಶೇ.25ರಷ್ಟು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಆನ್'ಲೈನ್ ನಲ್ಲೂ ದತ್ತು ಸ್ವೀಕರಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT