ರಾಜ್ಯ

ಶವಸಂಸ್ಕಾರ ನಡೆಸಲು ಕೂಡ ಯೋಗ್ಯತೆಯಿಲ್ಲದ ಸರ್ಕಾರ ಇದು-ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್

Sumana Upadhyaya

ಬೆಂಗಳೂರು: ಕೋವಿಡ್ ನಿಂದ ತೀರಿಕೊಂಡವರನ್ನು ನೆಮ್ಮದಿಯಾಗಿ ಶವಸಂಸ್ಕಾರ ಮಾಡಲು ಯೋಗ್ಯತೆ ಇಲ್ಲದಿರುವ ಸರ್ಕಾರವಿದು ಎಂದು ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಪ್ರಸ್ತುತ ಕೋವಿಡ್ ನಿಂದ ಮೃತಪಟ್ಟ ಅನೇಕ ರೋಗಿಗಳ ಶವಸಂಸ್ಕಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬೆಂಗಳೂರಿನಲ್ಲಿಂದು ಮಾತನಾಡಿದ ಡಿ ಕೆ ಸುರೇಶ್, ಶವಸಂಸ್ಕಾರವನ್ನು ಕೂಡ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಗದಿರುವ ನೀಚಗೆಟ್ಟ ಸರ್ಕಾರವಿದು ಎಂದು ಟೀಕಿಸಿದ್ದಾರೆ.

ಶವಸಂಸ್ಕಾರ ನಡೆಸಲು ಹಿಂದೂ ಧರ್ಮದಲ್ಲಿ ವಿಶೇಷ ಪದ್ಧತಿಗಳಿರುತ್ತವೆ, ಇಂದಿನ ಅವ್ಯವಸ್ಥೆ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಮಾತ್ರ ಹೇಳುತ್ತಿರುವುದಲ್ಲ, ಸಾಮಾನ್ಯ ಜನರು, ಚಿತ್ರನಟರು, ಕಲಾವಿದರು, ಸಾಹಿತಿಗಳು, ಬುದ್ಧಿಜೀವಿಗಳು ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಚಿತಾಗಾರಗಳಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಿ ಎಂದು ಸರದಿ ಸಾಲಿನಲ್ಲಿ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಅಧಿಕಾರದಲ್ಲಿರಲು ಯೋಗ್ಯತೆಯಿಲ್ಲ ಎಂದು ಆರೋಪಿಸಿದ್ದಾರೆ.

ನಾಳೆ ರಾಜ್ಯ ಸರ್ಕಾರದ ಸಂಪುಟ ಸಚಿವರು ಬೆಂಗಳೂರು ಶಾಸಕರ ಸಭೆ ಕರೆದಿದ್ದಾರೆ. ಸಭೆಯಲ್ಲಿ ವಿಚಾರಗಳನ್ನು ಮಂಡನೆ ಮಾಡಿ ಚರ್ಚಿಸುತ್ತೇವೆ ಎಂದಿದ್ದಾರೆ. 

SCROLL FOR NEXT