ಬೆಂಗಳೂರು: ಹೆಮ್ಮಾರಿ ಕೊರೋನಾಗೆ ಪೊಲೀಸ್ ಇಲಾಖೆ ಕಂಗಾಲಾಗಿದ್ದು, ನಗರದಲ್ಲಿ 100 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ನಗರದಲ್ಲಿ ಪ್ರತಿಭಟನೆಗಳ ಬಂದೋಬಸ್ತ್, ನೈಟ್ ಕರ್ಫ್ಯೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, ದೈನಂದಿನ ಕೆಲಸಗಳಲ್ಲಿ ಪೊಲೀಸರು ತೊಡಗಿಕೊಂಡಿದ್ದು, ಸಾರ್ವಜನಿಕರ ನಡುವೆ ಓಡಾಡುತ್ತಿರುವುದರಿಂದ ಪೊಲೀಸರಿಗೆ ಹೆಚ್ಚಾಗಿ ಸೋಂಕು ಹರಡುತ್ತಿದೆ.
ಇದರಿಂದೆ ಈ ವರೆಗೂ ಬೆಂಗಳೂರಲ್ಲಿ 100 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಮಹಾಮಾರಿಗೆ ಇಬ್ಬರು ಪೊಲೀಸರು ಬಲಿಯಾಗಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್'ಸ್ಟೇಬರ್ ಮಹದೇವಪ್ಪ ಹಾಗೂ ಅಶೋಕ ನಗರ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹನುಮಂತಪ್ಪ ಮೃತಪಟ್ಟಿದ್ದಾರೆ.
ಈ ಪೈಕಿ ಕೋವಿಡ್ ವ್ಯಾಕ್ಸಿನ್ ಎರಡು ಡೋಸ್ ಪಡೆದಿದ್ದ ಹೆಡ್ ಕಾನ್ ಸ್ಟೇಬಲ್ ಮಹದೇವಪ್ಪ ಅವರು ಸೋಂಕಿತರಾಗಿದ್ದು, ಪೊಲೀಸರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ನಗರದಲ್ಲಿ ಪ್ರತೀ ಪೊಲೀಸ್ ಠಾಣೆಯಲ್ಲೂ ಕೊರೋನಾ ಪ್ರಕರಣ ಏರುತ್ತಲೇ ಇದ್ದು, ಪಶ್ಚಿಮ ವಿಭಾಗದಲ್ಲಿ ಅತೀ ಹೆಚ್ಚು 34 ಮಂದಿ ಪೊಲೀಸರಲ್ಲಿ ಸೋಂಕು ದೃಢಪಟ್ಟಿದೆ. ಇದೀಗ ಎಲ್ಲಾ ಪೊಲೀಸ್ ಠಾಣೆಯಲ್ಲೂ ಸ್ಯಾನಿಟೈಸ್ ಮಾಡಲಾಗುತ್ತಿದೆ, ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ.
ಪೊಲೀಸರು ಕೊರೋನಾ ವಾರಿಯರ್ಸ್ ಗಳಾಗಿದ್ದು, ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳಿಗೆ ಕೌನ್ಸಿಲಿಂಗ್ ಗಳನ್ನು ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಭಾಯಿಸುವ ವೇಳೆ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸಿಬ್ಬಂದಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.