ರಾಜ್ಯ

ಯಾದಗಿರಿ: ಶಹಾಪುರ ಬಳಿ ಭೀಕರ ಅಪಘಾತ, ಐವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವು

Lingaraj Badiger

ಯಾದಗಿರಿ: ಟಂಟಂ ಮತ್ತು ಬೂದಿ ಟ್ಯಾಂಕರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಮಹಿಳಾ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಅಯ್ಯಮ್ಮ (60), ಶರಣಮ್ಮ (40), ಕಾಸೀಂಬೀ (40), ಭೀಮಬಾಯಿ (40) ಮತ್ತು ದೇವಿಂದ್ರಮ್ಮ (70) ಎಂದು ಗುರುತಿಸಲಾಗಿದ್ದು, ಮೃತರೆಲ್ಲರು ವಡಗೇರ ತಾಲೂಕಿನ ಮುನಮುಟಗಿ ಗ್ರಾಮಸ್ಥರಾಗಿದ್ದಾರೆ.

ಮುನಮುಟಗಿ ಗ್ರಾಮದಿಂದ ಟಂಟಂನಲ್ಲಿ 10 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಪೈಕಿ, ಐವರು ಮೃತಪಟ್ಟಿದ್ದರೆ, ಇನ್ನೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಟಂಟಂ ವಾಹನದಲ್ಲಿ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕೊಳ್ಳೂರು ಬಳಿಯ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದ್ದು, ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

SCROLL FOR NEXT