ರಾಜ್ಯ

ಸಿಡಿ ಪ್ರಕರಣ: ಕೊರೋನಾ ಹೆಚ್ಚಳ ಹಿನ್ನೆಲೆ ಎಸ್ಐಟಿ ತನಿಖೆ ಸ್ಥಗಿತ

Manjula VN

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ​ (​ಎ​ಸ್‌​ಐ​ಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

 ಈ ನಡುವೆ ಕೊರೋನಾ ಪಾಸಿಟಿವ್ ಬಂದು ಕಳೆದೆರಡು ವಾರಗಳ ಹಿಂದೆಯೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ರಮೇಶ್ ಜಾರಕಿಹೊಳಿಯವರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ. 

ವಾರದ ಹಿಂದೆಯೇ ಎಸ್ಐಟಿ ಮುಂದೆ ಜಾರಕಿಹೊಳಿಯವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ವಿಚಾರಣೆಗೆ ಹಾಜರಾಗಿಲ್ಲ. ಇನ್ನು ಎಲ್ಲಾ ಅಧಿಕಾರಿಗಳೂ ಕೂಡ ಕೊರೋನಾ ಕರ್ತವ್ಯದಲ್ಲಿ ಕಾರ್ಯಮಗ್ನರಾಗಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕಿದ್ದು, ಹೆಚ್ಚೆಚ್ಚು ಸಾಕ್ಷ್ಯಾಧಾರ, ದಾಖಲೆಗಳನ್ನು ಸಂಗ್ರಹಿಸಬೇಕಿದೆ. ಇನ್ನು ಸಾಕಷ್ಟು ಅಧಿಕಾರಿಗಳೂ ಕೂಡ ಈ ಪ್ರಕರಣ ಸಂಬಂಧ ಆಸಕ್ತಿಯನ್ನು ತೋರುತ್ತಿಲ್ಲ. ಹೀಗಾಗಿ ತನಿಖೆ ಕ್ಲಿಷ್ಟಕರವಾಗಿದೆ. ಸರ್ಕಾರದ ಮೇಲೂ ಸಾಕಷ್ಟು ಒತ್ತಡಗಳಿವೆ ಎಂದು ಎಸ್ಐಟಿ ಹಿರಿಯ ಅಧಿಕಾರಿ ಹೇಳಿದ್ದಾರೆ.

ಪ್ರಕರಣ ಸಂಬಂಧ ಇಬ್ಬರು ಶಂಕಿತ ವ್ಯಕ್ತಿಗಳನ್ನು ಹುಡುಕಲು ಎರಡು ತಂಡವನ್ನು ರಚನೆ ಮಾಡಲಾಗಿದೆ. ನರೇಶ್ ಗೌಡ ಹಾಗೂ ಶ್ರವಣ್ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. ಈ ಇಬ್ಬರನ್ನೂ ವಶಕ್ಕೆ ಪಡೆದ ನಂತರವಷ್ಟೇ ಮುಂದಿನ ತನಿಖೆ ಸುಲಭವಾಗಲಿದೆ. ವಿಡಿಯೋದಲ್ಲಿ ಕಂಡು ಬಂದಿರುವ ಯುವತಿ ನ್ಯಾಯಾಲಯದ ಮುಂದೆ ಎಸ್ಐಟಿ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾಳೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಪರಿಣಾಮ ನಾವು ಹೆಚ್ಚು ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT