ರಾಜ್ಯ

ಆಫ್ರಿಕನ್ ಪ್ರಜೆಗಳಿಂದ ಅನಗತ್ಯವಾಗಿ ಪೊಲೀಸರ ಮೇಲೆ ಹಲ್ಲೆ, ಎನ್ ಡಿಪಿಎಸ್ ಕಾಯ್ದೆಯಡಿ ಬಂಧನ- ಸಿಎಂ ಬೊಮ್ಮಾಯಿ

Nagaraja AB

ನವದೆಹಲಿ: ಕರ್ನಾಟಕದಲ್ಲಿರುವ ಆಫ್ರಿಕನ್ ಪ್ರಜೆಗಳು ಹಿಂಸಾತ್ಮಕವಾಗಿ ವರ್ತಿಸಿದ್ದರಿಂದ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಫ್ರಿಕನ್ ಪ್ರಜೆಗಳು ಅನಗತ್ಯವಾಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಪ್ರಕರಣ ಕುರಿತು ಸಿಐಡಿಯಿಂದ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

 ಕಳೆದ ಎರಡು ವರ್ಷಗಳಲ್ಲಿ ಡ್ರಗ್ ಸಮಸ್ಯೆಯನ್ನು ಕಠಿಣವಾಗಿ ನಿರ್ವಹಿಸುತ್ತಿದ್ದೇವೆ, ರಾಜ್ಯದಲ್ಲಿ ಅನೇಕ ಆಫ್ರಿಕನ್ ಪ್ರಜೆಗಳು ಇದ್ದಾರೆ. ಅವರಲ್ಲಿ ಬಹುತೇಕ ಮಂದಿ ವೀಸಾ ಅವಧಿ ಮುಗಿದಿದೆ. ಈ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಪಿಐಟಿ ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು. 

ಭಾನುವಾರ ರಾತ್ರಿ ಮಾದಕ ದ್ರವ್ಯ ಸಾಗಾಟದ ಆರೋಪದ ಮೇಲೆ ಕಾಂಗೋ ಪ್ರಜೆ ಜೋವಾ ಅಲಿಯಾಸ್ ಜೋಯೆಲ್ ಶಿಂದಾನಿ ಮಾಲು ಬಂಧಿಸಲಾಗಿತ್ತು. ಬಂಧನದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಹೋಗಿ ಕುಸಿದುಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಹೃದಯ ಸ್ತಂಭನದಿಂದಾಗಿ ಕಸ್ಟಡಿಯಲ್ಲಿ ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇದು ಲಾಕಪ್ ಡೆತ್ ಪ್ರಕರಣ ಎಂದು ಪ್ರತಿಭಟನಾಕಾರರು ಆರೋಪಿಸಿ ಜೆಸಿ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆ ವೇಳೆ ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. 

SCROLL FOR NEXT