ರಾಜ್ಯ

ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ; ಆಗಸ್ಟ್ 25 ರೊಳಗೆ ತನಿಖಾ ವರದಿ ಕೇಳಿದ ಹೈಕೋರ್ಟ್ 

Nagaraja AB

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ವಿಕೆ ಶಶಿಕಲಾ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ರಾಜಾತಿಥ್ಯ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಖಲಿಸಲಾಗಿರುವ ಎಫ್ ಐಆರ್ ತನಿಖೆಯ ವಿವರಗಳನ್ನು ಹೈಕೋರ್ಟ್ ಶುಕ್ರವಾರ ಕೇಳಿದೆ.  

ಆಗಸ್ಟ್ 25ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಎಸಿಬಿಗೆ ನಿರ್ದೇಶಿಸಿ  ಮುಖ್ಯ ನ್ಯಾಯಾಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಾಧೀಶ ಸುರಾಜ್ ಗೋವಿಂದ ರಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. ಚೆನ್ನೈನ ಅಲ್ವಾರ್ ಪೇಟೆಯ ಸಾಮಾಜಿಕ ಕಾರ್ಯಕರ್ತೆ ಹಾಗೂ ಶಿಕ್ಷಣ ತಜ್ಞೆ ಕೆ ಎಸ್ ಗೀತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಂತರ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು.

ಬಹು ಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಅವರಿಗೆ ರಾಜಾತಿಥ್ಯ ನೀಡುವ ಆರೋಪ ಕುರಿತ ಅಂತಿಮ ವರದಿ ನೀಡಲು ಸಂಬಂಧಿತ ಸಂಸ್ಥೆಗೆ ನಿರ್ದೇಶಿಸಬೇಕೆಂದು ಗೀತಾ ನ್ಯಾಯಪೀಠದ ಮೊರೆ ಹೋಗಿದ್ದರು.

ಶಶಿಕಲಾ ಹಾಗೂ ಇಳವರಸಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಆರೋಪದ ತನಿಖೆ ನಂತರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಸಲ್ಲಿಸಿದ್ದ ಸಮಗ್ರ ವರದಿಯೊಂದನ್ನು ಅರ್ಜಿದಾರರು ಕೋರಿದಲ್ಲದೇ, ಈವರೆಗೂ ವಿಚಾರಣೆ ಕುರಿತ ಅಂತಿಮ ವರದಿ ನೀಡಿಲ್ಲ ಎಂದು ಹೇಳಿದ್ದರು.  ತದನಂತರ ಈ ಆರೋಪಗಳಿಗೆ ಸಂಬಂಧಿಸಿದಂತೆ ಎಸಿಬಿ 2018ರಲ್ಲಿ ಎಫ್ ಐಆರ್ ದಾಖಲಿಸಿರುವುದಾಗಿ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

SCROLL FOR NEXT