ರಾಜ್ಯ

ಬೆಂಗಳೂರಿನಲ್ಲಿ ವೃದ್ಧ ದಂಪತಿ ಹತ್ಯೆ: ನಾಲ್ವರ ಬಂಧನ, 193 ಗ್ರಾಂ ಚಿನ್ನಾಭರಣ ವಶ

Lingaraj Badiger

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದಂದೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್​ ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ನಾರಾಯಣಪ್ಪ ಅಲಿಯಾಸ್ ನಾರಾಯಣಸ್ವಾಮಿ, ತಿರುಮಲ, ರಾಮು ಹಾಗೂ ಶೇಕ್ ಆಸೀಫ್ ಬಂಧಿತ ಆರೋಪಿಗಳು.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 193 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಕಳೆದ 12 ವರ್ಷಗಳಿಂದ ವೃದ್ಧೆ ದಂಪತಿ ಮನೆಯಲ್ಲಿ ವಾಸವಿದ್ದ ಹಿಂದೂಪುರ ಮೂಲದ ನಾರಾಯಣಪ್ಪ ಇತ್ತೀಚಿಗೆ ವಿಪರೀತ ಸಾಲಕ್ಕೆ ಸಿಲುಕಿದ್ದ. ವೃದ್ಧ ದಂಪತಿಯ ಚಿನ್ನಾಭರಣ ಮತ್ತು ಹಣಕಾಸುವ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ ನಾರಾಯಣಪ್ಪ ಹಣದ ಆಸೆಗೆ ಆಶ್ರಯ ಕೊಟ್ಟವರನ್ನೇ ಇತರೆ ಆರೋಪಿಗಳ ಜತೆ ಸೇರಿ ಕೊಲೆ ಮಾಡಿದ್ದಾನೆ.

ಹತ್ಯೆ‌ಗೀಡಾದ ಶಾಂತರಾಜು (70), ಪ್ರೇಮಲತಾ (65) ದಂಪತಿ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ವಾಸಿಸುತ್ತಿದ್ದರು. ಶಾಂತರಾಜು ಬಿಎಂಟಿಸಿ ನಿವೃತ್ತ ನೌಕರರಾಗಿದ್ದು, ಕಳೆದ 20 ವರ್ಷಗಳಿಂದ ಕಾಶಿನಗರದಲ್ಲಿ ವಾಸವಾಗಿದ್ದರು. ಹತ್ಯೆಯಾಗಿರುವ ದಂಪತಿಗೆ ಮಕ್ಕಳಿರಲಿಲ್ಲ. ಒಂದು ಮನೆಯಲ್ಲಿ ದಂಪತಿ ಇದ್ದು, ಇನ್ನೇರಡು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು.

SCROLL FOR NEXT