ರಾಜ್ಯ

ಬಾಲಕನ ಜೀವ ಉಳಿಸಿದ ಕಾರ್ಮಿಕನಿಗೆ ರೈಲ್ವೇ ಇಲಾಖೆ ಗೌರವ

Harshavardhan M

ಬೆಂಗಳೂರು: ಬೆಂಗಳೂರು ರೈಲ್ವೇ ವಿಭಾಗದ ವ್ಯವಸ್ಥಾಪಕ ಶ್ಯಾಂ ಸಿಂಗ್ ಅವರು ಬಾಲಕನ ಜೀವ ರಕ್ಷಿಸಿದ ರೈಲ್ವೇ ಸಿಬ್ಬಂದಿ ಕಾವಡಿ ಮಂಜಪ್ಪ ಅವರನ್ನು ಗೌರವಿಸಿದ್ದಾರೆ. ಈ ಸಂದರ್ಭ ಹಿರಿಯ ರೈಲ್ವೇ ಎಂಜಿನಿಯರ್ ಅಲೋಕ್ ರಂಜನ್ ದಾಸ್ ಕೂಡಾ ಉಪಸ್ಥಿತರಿದ್ದರು. 

ಹಾಸನ- ಯಶವಂತಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕ ಮಾರ್ಗ ಮಧ್ಯ ಮುಂಜಾನೆ 3ರ ವೇಳೆಗೆ ರೈಲಿನಿಂದ ಬಿದ್ದುಬಿಟ್ಟಿದ್ದ. ಬಾಲಕನ ಹೆತ್ತವರಿಗೆ ಈ ವಿಷಯ ತಡವಾಗಿ ತಿಳಿದುಬಂದಿತ್ತು. ನಂತರ ರೈಲನ್ನು ನಿಲ್ಲಿಸಲಾಗಿತ್ತು. 

ಬಾಲಕ ಸಮುದ್ರವಳ್ಳಿ ಮಾರ್ಗದಲ್ಲಿ ಬಿದ್ದುಬಿಟ್ಟಿದ್ದ. ಬಾಲಕ ಬಿದ್ದುದನ್ನು ಆ ಕತ್ತಲಿನಲ್ಲೂ ರೈಲ್ವೇ ಸಿಬ್ಬಂದಿ ಕಾವಡಿ ಮಂಜಪ್ಪ ಒಡನೆಯೇ ಗಮನಿಸಿದ್ದರು. ತಲೆಗೆ ಪೆಟ್ಟಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕನನ್ನು ಕೂಡಲೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ ಸ್ಟೇಷನ್ ಮಾಸ್ಟರ್ ಗೆ ಈ ಸುದ್ದಿ ಮುಟ್ಟಿಸಿದ್ದರು. 

ಹೆತ್ತವರು ತಮ್ಮ ಮಗನಿಗಾಗಿ ಹುಡುಕಾಟ ನಡೆಸುವಷ್ಟರ ವೇಳೆಗೆ ಅವರು ಬಾಲಕ ಬಿದ್ದಿದ್ದ ಸ್ಥಳದಿಂದ 100 ಕಿ.ಮೀ ದೂರ ಬಂದುಬಿಟ್ಟಿದ್ದರು. ಬಾಲಕ ಕಾಣೆಯಾಗಿರುವ ಕುರಿತು ರೈಲು ನಿಲ್ದಾಣದ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಪಾಲಕರಿಗೆ ತಮ್ಮ ಮಗ ಸಮುದ್ರವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗತಿ ತಿಳಿದು ನಿರಾಳರಾಗಿದ್ದರು.

SCROLL FOR NEXT