ರಾಜ್ಯ

ಜಾತೀಯತೆ ಮತ್ತು ಭ್ರಷ್ಟಾಚಾರ ನನ್ನ ಪ್ರಬಲ ಶತ್ರುಗಳು: ನ್ಯಾಯಮೂರ್ತಿ ಸುಧೀಂದ್ರರಾವ್

Lingaraj Badiger

ಬೆಂಗಳೂರು: ವಿದ್ಯಾರ್ಥಿ ದೆಸೆಯಿಂದಲೂ ಜಾತೀಯತೆ ಮತ್ತು ಭ್ರಷ್ಟಾಚಾರ ನನ್ನ ಪ್ರಬಲ ಶತ್ರುಗಳು, ನನ್ನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ನಾನು ಒಂದೇ ಒಂದು ಅವಕಾಶವನ್ನು ಬಿಡಲಿಲ್ಲ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಹೆಸರಾದ ನ್ಯಾಯಮೂರ್ತಿ ಎನ್‌ಕೆ ಸುಧೀಂದ್ರರಾವ್ ಅವರು ಶುಕ್ರವಾರ ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಸುಧೀಂದ್ರರಾವ್ ಅವರು ನಿನ್ನೆ ಸೇವೆಯಿಂದ ನಿವೃತ್ತರಾಗಿದ್ದು, ಬೆಂಗಳೂರು ವಕೀಲರ ಸಂಘದಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ರಾವ್ ಅವರು 2011ರಲ್ಲಿ ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದಾಗ ಅಕ್ರಮ ಭೂ ವ್ಯವಹಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಜಾಮೀನು ನಿರಾಕರಿಸಿ ಜೈಲಿಗೆ ಕಳುಹಿಸಿದ್ದರು.

ಸನ್ಮಾನ ಸ್ವೀಕರಿ ಮಾತನಾಡಿದ ಸುಧೀಂದ್ರರಾವ್ ಅವರು, ತಮ್ಮ ಬಾಲ್ಯವನ್ನು ಸ್ಮರಿಸಿದ ರಾವ್, "ನ್ಯಾಯಾಧೀಶನಾಗಿ ನನ್ನ ಪಾತ್ರ ಇಂದು ಅಧಿಕೃತವಾಗಿ ಮುಗಿದಿದ್ದರೂ ಸಹ, ಸಮಾಜಕ್ಕೆ ಸರಿಯಾದ ಸೇವೆ ಸಲ್ಲಿಸುವುದಕ್ಕಾಗಿ ನಾನು ನನ್ನನ್ನು ಜಡ್ಜ್ ಮಾಡಿಕೊಳ್ಳುತ್ತಿದ್ದೇನೆ. ಕಷ್ಟಕರ ಪರಿಸ್ಥಿತಿಯಲ್ಲಿ ನನ್ನ ಅನುಭವವು ಆಕಸ್ಮಿಕ ಅಥವಾ ಅಪರೂಪವಾಗಿರುವುದಿಲ್ಲ" ಎಂದು ಹೇಳಿದರು.

ಸಂಪನ್ಮೂಲಗಳನ್ನು ಹಂಚಿಕೊಳ್ಳುವುದು ಮತ್ತು ಅದನ್ನು ಬೆರೆಯವರಿಗೆ ಉಳಿಸುವುದು ಸಂಪನ್ಮೂಲ ವ್ಯಕ್ತಿಯ ಕರ್ತವ್ಯ ಎಂದ ಅವರು, ಕಾಗೆಗೆ ಮುಷ್ಟಿ ಅನ್ನ ನೀಡಿದರೆ ಅದು ತನ್ನ ಬಂಧು ಮಿತ್ರರನ್ನು ಆಹ್ವಾನಿಸುತ್ತದೆ. ಆದರೆ ಅದೆ ಅನ್ನ ಭಿಕ್ಷುಕನಿಗೆ ಕೊಟ್ಟರೆ ಆತ ಯಾರನ್ನೂ ಕರೆಯುವುದಿಲ್ಲ ಎಂದು ಸಂಸ್ಕೃತದ ಮಾತನ್ನು ಉಲ್ಲೇಖಿಸಿದ ಅವರು, ಪ್ರಾಣಿಗಳಿಗಿಂತ ಮನುಷ್ಯರಲ್ಲಿ ಸ್ವಾರ್ಥವೇ ಹೆಚ್ಚು ಎಂದರು.

ಯಾವುದೇ ನ್ಯಾಯಮೂರ್ತಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ಯಾಕೆಂದರೆ, ನ್ಯಾಯಮೂರ್ತಿ ಎಂಬ ಪದವೇ ಪ್ರಾಮಾಣಿಕತೆಯ ಮತ್ತೊಂದು ಜೀವಂತ ರೂಪ ಎಂದು ನ್ಯಾಯಮೂರ್ತಿ ಸುಧೀಂದ್ರರಾವ್‌ ಬಣ್ಣಿಸಿದರು.

ನ್ಯಾಯಮೂರ್ತಿಗಳ ಪ್ರಾಮಾಣಿಕತೆ ಎಂಬುದು ಗಣಿತದ ಲೆಕ್ಕಾಚಾರದಂತೆ ಇರಬೇಕು. ಅವರು ಶೇಕಡ 99ರಷ್ಟು ಪ್ರಾಮಾಣಿಕರಾಗಿದ್ದರು ಎಂದು ಹೇಳುವ ಬದಲಿಗೆ ಶೇ. 100ರಷ್ಟು ಪ್ರಾಮಾಣಿಕವಾಗಿ ಇರುವುದೇ ನಿಜವಾದ ನ್ಯಾಯಮೂರ್ತಿಯ ಲಕ್ಷಣ ಎಂದರು.

ಈ ವೇಳೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು , ಸುಧೀಂದ್ರರಾವ್ ಅವರ ನಿರ್ಭಯತೆ ಮತ್ತು ದೃಢತೆಯನ್ನು ಶ್ಲಾಘಿಸಿದರು, "ಅವರು ಭ್ರಷ್ಟಾಚಾರ ವಿರೋಧಿ ನ್ಯಾಯಾಧೀಶರೆಂದೇ ಜನಪ್ರಿಯರಾಗಿದ್ದರು. ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾಗಿದ್ದಾ ಅವರ ಸಮರ್ಪಣೆ ಮತ್ತು ಆಸಕ್ತಿಯು ಸಾರ್ವಜನಿಕರಲ್ಲಿ ವಿಶ್ವಾಸ ಗಳಿಸಿತು" ಎಂದು ನೆನಪಿಸಿಕೊಂಡರು.

SCROLL FOR NEXT