ರಾಜ್ಯ

ಜ.ಬಿಪಿನ್ ರಾವತ್ ಸಾವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

Sumana Upadhyaya

ಹಾವೇರಿ: ರಕ್ಷಣಾ ಪಡೆ ಮುಖ್ಯಸ್ಥ (CDS) ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಜು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಇಂದು ನಡೆದ ಚುನಾವಣೆಯಲ್ಲಿ ಅವರು ಶಿಗ್ಗಾಂವ್ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರರರ ಜೊತೆ ಅವರು ಮಾತನಾಡಿದರು. 

ಇದನ್ನು ಪ್ರತಿ ಭಾರತೀಯನೂ ಅತ್ಯಂತ ಕಠಿಣ ಶಬ್ಧಗಳಲ್ಲಿ ಖಂಡಿಸಬೇಕು. ದೇಶಕ್ಕಾಗಿ ದೊಡ್ಡ ಸೇನೆಯನ್ನು ಮುನ್ನಡೆಸಿ ರಕ್ಷಣೆ ಮಾಡುತ್ತಿದ್ದವರ ಬಗ್ಗೆ, ಆ ಹುದ್ದೆಯ ಘನತೆಯ ಕುರಿತು ಪರಿಕಲ್ಪನೆ ಇಲ್ಲದೆ ಅತ್ಯಂತ ಬೇಜವಾಬ್ದಾರಿಯಿಂದ ಟ್ವೀಟ್ ಮಾಡಿರುವವರ ಕೃತ್ಯಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್, ಟ್ವೀಟ್ ಮಾಡಿರುವವರ ವಿಳಾಸವನ್ನು ಪತ್ತೆ ಮಾಡಿ ಕೂಡಲೇ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಕೃತಿಯನ್ನು ಕ್ಷಮಿಸುವ ಮಾತಿಲ್ಲ. ಖಂಡಿತವಾಗಿ ಶಿಕ್ಷೆ ಆಗಲೇಬೇಕು ಎಂದರು. 

ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಕಮ್ಯಾಂಡ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು, ಅತ್ಯುತ್ತಮ ಚಿಕಿತ್ಸೆಯನ್ನು ಪರಿಣಿತ ವೈದ್ಯರ ತಂಡ ನೀಡುತ್ತಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. 

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದಿಂದ ಕಾನೂನು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಶ್ನೋತ್ತರ ಇರುತ್ತದೆ. ಪ್ರತಿಪಕ್ಷದವರು ಎತ್ತುವ ವಿಚಾರಗಳಿಗೆ ಸೂಕ್ತ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು. 

ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಬಗ್ಗೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪ್ರತಿಕ್ರಯಿಸಿ, ಈ ಬಗ್ಗೆ ಸಭೆ ನಡೆಸಲಾಗಿದ್ದು, ಸೂಕ್ತ ಲಸಿಕೆ, ಔಷಧಿಗಳ ಪೂರೈಕೆ ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸಲು ತಿಳಿಸಲಾಗಿದೆ.
ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರದಿಂದ ಮಾರ್ಗದರ್ಶನವನ್ನ ನಿರೀಕ್ಷಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ನಿಗದಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

SCROLL FOR NEXT