ರಾಜ್ಯ

ಡಿ.13 ರಿಂದ ಸಿಎಂ ಬೊಮ್ಮಾಯಿ 3 ದಿನ ಉತ್ತರ ಪ್ರದೇಶ ಪ್ರವಾಸ; ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ದರ ಹೆಚ್ಚಳಕ್ಕೆ ಸಮರ್ಥನೆ

Sumana Upadhyaya

ಬೆಂಗಳೂರು: ನಾಡಿದ್ದು ಸೋಮವಾರ(ಡಿ.13)ದಿಂದ 3 ದಿನಗಳ ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬ ಸಮೇತರಾಗಿ ಉತ್ತರ ಪ್ರದೇಶ ಪ್ರವಾಸ ಹೋಗುತ್ತಿದ್ದಾರೆ. 

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದು, ಅಧಿವೇಶನದಲ್ಲಿ ಭಾಗವಹಿಸಿದ ಬಳಿಕ, ವಿಶೇಷ ವಿಮಾನದ ಮೂಲಕ ವಾರಾಣಸಿಗೆ ತೆರಳಿ ಅಂದು ಸಾಯಂಕಾಲ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಕಾಶಿ, ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. 

ಮರುದಿನ ಮಂಗಳವಾರ ಸಾರನಾಥಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ(CM Basavaraja Bommai), ಸಾರನಾಥದಲ್ಲಿರುವ ಬೌದ್ಧ ಧರ್ಮದ ಪವಿತ್ರ ಸ್ಥಳಕ್ಕೆ ತೆರಳಲಿದ್ದು, ಬಳಿಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಬುಧವಾರ ಅಯೋಧ್ಯೆಗೆ ತೆರಳಿ ರಾಮಜನ್ಮಭೂಮಿಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸಿಎಂ ಮತ್ತು ಡಿಸಿಎಂಗಳಿಗಾಗಿ ಈ ಪ್ರವಾಸ ಆಯೋಜನೆ ಮಾಡಲಾಗಿದೆ. 

ಕಾಂಗ್ರೆಸ್ ವಿರೋಧ ಪಕ್ಷವಾಗಿರುವುದರಿಂದ ಮತಾಂತರ ನಿಷೇಧ ಮಸೂದೆ ಸೇರಿದಂತೆ ಎಲ್ಲಕ್ಕೂ ವಿರೋಧ ವ್ಯಕ್ತಪಡಿಸುವುದು ಸಹಜ ಎಂದರು. 

ಓಮಿಕ್ರಾನ್ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕೊರೋನಾ ಟೆಸ್ಟ್ ನೆಪದಲ್ಲಿ ದಂಧೆ ನಡೆಯುತ್ತಿದೆ ಎಂಬ ಡಿ.ಕೆ. ಶಿವಕುಮಾರ್​ ಅವರ ಆರೋಪ ಬಗ್ಗೆ ಕೇಳಿದಾಗ, ಕೊವಿಡ್ ಟೆಸ್ಟ್‌ಗೆ 500 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಶುಲ್ಕವಿದೆ. ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಲ್ಲಿ ದರ ಹೆಚ್ಚಾಗಿದೆ. ಆದ್ದರಿಂದ ಇದೊಂದು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರ  ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

SCROLL FOR NEXT