ರಾಜ್ಯ

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಸರ್ಕಾರ ನಿರ್ಧಾರ: ಶೋಭಾ ಕರಂದ್ಲಾಜೆ

Manjula VN

ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಕೃಷಿ ಇಲಾಖೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆಯವರು ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಲಿದೆ. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯ ಸಂದರ್ಭ ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಎನ್ನುವುದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು. ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ವಿಚಾರ ಕುರಿತಂತೆ ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿ ಈ ಬಗ್ಗೆ ಹೆಚ್ಚು ಮಾತಾಡಲ್ಲ. ಆದರೆ, ನಾನೇ ಕಂಡಂತೆ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಬಾಂಗ್ಲಾ ದೇಶದಿಂದ ಬರುವ ಮಕ್ಕಳನ್ನು ಇಲ್ಲಿಗೆ ತಂದು ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರರನ್ನಾ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

 ಈ ಮಾನಸಿಕತೆ ಇರುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಜಾತಿ ಹಾಗೂ ಧರ್ಮದ ಆಧಾರದಲ್ಲಿ ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಇರಬಹುದು ಎನ್ನುವುದು ಕಾಂಗ್ರೆಸ್ ಮಾನಸಿಕತೆ. ಈ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ ಮಾಡದೇ ಇರುವುದು ಒಳ್ಳೆಯದು. ಅವರ ಪಕ್ಷ ನಿಂತಿದ್ದೆ ಇದೇ ಆಧಾರದಲ್ಲಿ. ಜಾತಿ, ಧರ್ಮ, ಒಂದು ವರ್ಗ ಓಲೈಸಿ ಅಧಿಕಾರ ಪಡೆಯುವುದು ಅಲ್ಲ ಎಂದು ಮೋದಿ ಅವರು ಎರಡು ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.

SCROLL FOR NEXT